ಲಾರಿಗೆ ತೂಫಾನ್ ವಾಹನ ಡಿಕ್ಕಿ.!➤ ಏಳು ಮಂದಿ ಮೃತ್ಯು, ಹಲವರಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಕಡಪ,ಮೇ.15 ಲಾರಿಗೆ ತೂಫಾನ್ ವಾಹನ ಡಿಕ್ಕಿ ಹೊಡೆದು ಏಳು ಮಂದಿ ಮೃತಪಟ್ಟಿರುವ ಭೀಕರ ಘಟನೆ ಸಂಭವಿಸಿದೆ. ಈ ಅಪಘಾತದಲ್ಲಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೃತರಲ್ಲಿ ಒಂದು ಮಗು, ಇಬ್ಬರು ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿದ್ದಾರೆ. ಇನ್ನು ಐವರು ಗಾಯಗೊಂಡಿದ್ದು, ಸ್ಥಳಕ್ಕೆ ಧಾವಿಸಿದ್ದಾರೆ ಪೊಲೀಸರು ಅವರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮೃತರೆಲ್ಲರೂ ತಾಡಿಪತ್ರಿ ಮೂಲದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಡಪ ಜಿಲ್ಲೆಯ ಕೊಂಡಪುರಂ ಮಂಡಲದ ಏತೂರು ಗ್ರಾಮದ ಚಿತ್ರಾವತಿ ಸೇತುವೆ ಬಳಿ ಈ ಮಾರಣಾಂತಿಕ ರಸ್ತೆ ಅಪಘಾತ ಸಂಭವಿಸಿದೆ. ಸತ್ತವರೆಲ್ಲರೂ ತೂಫಾನ್ ವಾಹನದಲ್ಲಿದ್ದರು. ಅನಂತಪುರಂ ಜಿಲ್ಲೆಯ ತಾಡಿಪತ್ರಿ ಹಾಗೂ ಕರ್ನಾಟಕದ ಬಳ್ಳಾರಿಯಿಂದ 14 ಮಂದಿ ಬಂಧುಗಳು ವಾಹನದಲ್ಲಿ ತಿರುಮಲ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ತೆರಳಿದ್ದರು. ಸ್ವಾಮಿಯ ದರ್ಶನ ಪಡೆದ ಬಳಿಕ ಅದೇ ವಾಹನದಲ್ಲಿ ಸ್ವಗ್ರಾಮಕ್ಕೆ ವಾಪಸಾಗುತ್ತಿದ್ದರು.

ಏತೂರು ಗ್ರಾಮಕ್ಕೆ ಬರುವಷ್ಟರಲ್ಲಿ ಭೀಕರ ಅಪಘಾತ ಸಂಭವಿಸಿದೆ.ಅಪಘಾತದ ಬಗ್ಗೆ ಮಾಹಿತಿ ಪಡೆದ ಸಿಐ ಸುದರ್ಶನ್ ಪ್ರಸಾದ್ ಮತ್ತು ಎಸ್‌ಐ ಸತ್ಯನಾರಾಯಣ ಸ್ಥಳಕ್ಕೆ ಆಗಮಿಸಿ ಅಪಘಾತದ ಕಾರಣವನ್ನು ಪತ್ತೆ ಮಾಡಿದರು. ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

error: Content is protected !!

Join the Group

Join WhatsApp Group