(ನ್ಯೂಸ್ ಕಡಬ) newskadaba.com, ಜು.01: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ‘ಗೃಹ ಜ್ಯೋತಿ’ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳ ಮರುಪರಿಶೀಲನಾ ಪ್ರಕ್ರಿಯೆ ಇಂದಿನಿಂದ ಅಧಿಕೃತವಾಗಿ ಆರಂಭಗೊಂಡಿದೆ.
ರಾಜ್ಯದ 5 ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಮತ್ತು ಸೆಸ್ಕ್ ವ್ಯಾಪ್ತಿಯಲ್ಲಿ ಈ ಮನೆ-ಮನೆ ತಪಾಸಣಾ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ ಸಂಪೂರ್ಣ ವರದಿ ಇಲ್ಲಿದೆ:2023ರ ಜುಲೈನಲ್ಲಿ ಜಾರಿಗೆ ಬಂದ ಈ ಯೋಜನೆಯ ಫಲಾನುಭವಿಗಳ ಮನೆಗಳಿಗೆ ಎಸ್ಕಾಂಗಳ ಮೀಟರ್ ರೀಡರ್ಗಳು ಹಾಗೂ ಸಿಬ್ಬಂದಿಗಳು ಖುದ್ದಾಗಿ ಭೇಟಿ ನೀಡಲಿದ್ದಾರೆ.
ಸ್ಥಳದಲ್ಲೇ ಭೌತಿಕ ಪರಿಶೀಲನೆ ನಡೆಸುವುದು ಈ ಪ್ರಕ್ರಿಯೆಯ ಏಕೈಕ ಮಾರ್ಗವಾಗಿದ್ದು, ಸಾರ್ವಜನಿಕರು ಸಿಬ್ಬಂದಿಯೊಂದಿಗೆ ಸಹಕರಿಸಬೇಕೆಂದು ಇಂಧನ ಇಲಾಖೆ ವಿನಂತಿಸಿದೆ.ಎಸ್ಕಾಂ ಸಿಬ್ಬಂದಿಗಳು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಫಲಾನುಭವಿಗಳು ಈ ಕೆಳಗಿನ ಮೂಲ ದಾಖಲೆಗಳನ್ನು ಅಥವಾ ಪೂರಕ ಮಾಹಿತಿಗಳನ್ನು ತೋರಿಸಲು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ:
- ಆಧಾರ್ ಕಾರ್ಡ್
- ಮತದಾರರ ಗುರುತಿನ ಚೀಟಿ
- ಪ್ಯಾನ್ ಕಾರ್ಡ್
- ರೇಷನ್ ಕಾರ್ಡ್
- ಫಲಾನುಭವಿಯ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಬಾಡಿಗೆ ಒಪ್ಪಂದದ ಪತ್ರಗಳು
- ಜಾತಿ ಪ್ರಮಾಣ ಪತ್ರ
“ಇದು ಕೇವಲ ಅರ್ಹತಾ ಪರಿಶೀಲನೆ ಮತ್ತು ದತ್ತಾಂಶ ನವೀಕರಣದ ಪ್ರಕ್ರಿಯೆಯಾಗಿದೆ. ಗ್ರಾಹಕರು ಯಾವುದೇ ಆತಂಕಕ್ಕೆ ಒಳಗಾಗದೆ, ತಮ್ಮ ಮನೆಗೆ ಬರುವ ಮೀಟರ್ ರೀಡರ್ಗಳಿಗೆ ಅಗತ್ಯ ದಾಖಲೆಗಳನ್ನು ತೋರಿಸಿ ಈ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಸಂಪೂರ್ಣ ಸಹಕಾರ ನೀಡಬೇಕು.”









