ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ; ಗರ್ಭಿಣಿ ಸೇರಿ ಇಬ್ಬರು ಸಜೀವ ದಹನ   

(ನ್ಯೂಸ್ ಕಡಬ)newskadaba.com ಕಣ್ಣೂರ್, ಫೆ.02. ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಕಾರನ್ನು ವ್ಯಾಪಿಸಿದ ಪರಿಣಾಮ ಗರ್ಭಿಣಿ ಸೇರಿದಂತೆ ಇಬ್ಬರೂ ಸಜೀವ ದಹನಗೊಂಡ ಘಟನೆ ದೇವರನಾಡು ಕೇರಳದ ಕಣ್ಣೂರಿನಲ್ಲಿ ನಡೆದಿದೆ.   ಕಣ್ಣೂರು ಜಿಲ್ಲಾಸ್ಪತ್ರೆಯ ಮುಂಭಾಗವೇ ಈ ದುರಂತ ನಡೆದಿದೆ.  ಹೀಗೆ ಕಾರಿನಲ್ಲಿ ಸಿಲುಕಿ ಸಜೀವ ದಹನಗೊಂಡವರನ್ನು ಪ್ರಜೀತ್ ಹಾಗೂ ಆತನ ಪತ್ನಿ ರೀಷಾ ಎಂದು ಗುರುತಿಸಲಾಗಿದೆ.

ಘಟನೆ ಸಂಭವಿಸುವ ವೇಳೆ  ಕಾರಿನಲ್ಲಿ  ಒಟ್ಟು ಆರು ಜನ ಪ್ರಯಾಣಿಸುತ್ತಿದ್ದರು. ಕಾರಿನ ಮುಂಭಾಗದ ಸೀಟಿನಲ್ಲಿ ಗರ್ಭಿಣಿ  ರೀಷಾ ಹಾಗೂ ಪತಿ ಪ್ರಜೀತ್ ಕುಳಿತಿದ್ದು, ಪ್ರಜೀತ್‌ ಅವರೇ ಕಾರು ಚಲಾಯಿಸುತ್ತಿದ್ದರು.  ಉಳಿದ ನಾಲ್ವರು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಆದರೆ ಕಾರಿಗೆ ಬೆಂಕಿ ಹತ್ತಿಕೊಂಡಾಗ ಹಿಂದಿನ ಸೀಟಿನಲ್ಲಿ ಕುಳಿತ ನಾಲ್ವರು ಕಾರಿನಿಂದ ಹೊರಬಂದು ಪಾರಾಗಿದ್ದಾರೆ. ಆದರೆ ಮುಂಭಾಗದ ಕಾರಿನ ಬಾಗಿಲು ಜಾಮ್ ಆದ ಪರಿಣಾಮ ಮಹಿಳೆ ಹಾಗೂ ಪತಿ ಕಾರಿನಿಂದ ಹೊರ ಬರಲಾಗದೇ ಸಜೀವ ದಹನಗೊಂಡಿದ್ದಾರೆ.

 

Scroll to Top