(ನ್ಯೂಸ್ ಕಡಬ) newskadaba.com ಜು. 12. ದುಷ್ಕರ್ಮಿಗಳ ತಂಡವೊಂದು ಎಟಿಎಂ ಯಂತ್ರವನ್ನೇ ಕಾರಿಗೆ ಕಟ್ಟಿ ಎಳೆದುಕೊಂಡು ಹೋಗಿ ಹಣ ದೋಚಿರುವ ಸಿನಿಮೀಯ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯ ಖೈರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜುಲೈ 11ರ ಶನಿವಾರದಂದು ನಡುರಾ ತ್ರಿ ಸುಮಾರು 2 ಗಂಟೆಗೆ ಕಪ್ಪು ಬಣ್ಣದ ಥಾರ್ ಕಾರಿನಲ್ಲಿ ಬಂದ ಐದಕ್ಕೂ ಹೆಚ್ಚು ಮಂದಿ ದರೋಡೆಕೋರರು, ಭಾರವಾದ ಹಗ್ಗದ ಒಂದು ತುದಿಯನ್ನು ಎಟಿಎಂ ಯಂತ್ರಕ್ಕೆ ಹಾಗೂ ಇನ್ನೊಂದು ತುದಿಯನ್ನು ಕಾರಿಗೆ ಕಟ್ಟಿ, ಕಾರನ್ನು ವೇಗವಾಗಿ ಚಲಾಯಿಸಿ ಯಂತ್ರವನ್ನು ಕಿಯೋಸ್ಕ್ ನಿಂದ ಕಿತ್ತುಕೊಂಡು, ವಾಹನದಲ್ಲಿ ತುಂಬಿಸಿ ಪರಾರಿಯಾಗಿದ್ದಾರೆ. ಬಳಿಕ ನಿರ್ಜನ ಪ್ರದೇಶದಲ್ಲಿ ಯಂತ್ರವನ್ನು ಒಡೆದು ನಗದು ದೋಚಿದ್ದಾರೆ ಎನ್ನಲಾಗಿದೆ.
ಕಾರು ಬಂದು ನಿಲ್ಲುವುದರಿಂದ ಹಿಡಿದು ಯಂತ್ರವನ್ನು ಎಳೆದುಕೊಂಡು ಹೋಗುವವರೆಗಿನ ಘಟನೆಯ ಸಂಪೂರ್ಣ ದೃಶ್ಯಗಳು ಎಟಿಎಂ ಕೇಂದ್ರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸದ್ಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಥಾರ್ ವಾಹನದ ನೋಂದಣಿ ಸಂಖ್ಯೆ ಹಾಗೂ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಜಿಲ್ಲೆಯ ಈ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆತಂಕಗೊಂಡಿರುವ ಸ್ಥಳೀಯರು, ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸಲು ಮತ್ತು ಎಟಿಎಂ ಕೇಂದ್ರಗಳ ಭದ್ರತೆ ಬಿಗಿಗೊಳಿಸಲು ಆಗ್ರಹಿಸಿದ್ದಾರೆ.










