ವಾರ್ತಾ ಮತ್ತು ಕ್ರೀಡಾ ಇಲಾಖೆಯ ನೂತನ ಆಯುಕ್ತರಾಗಿ ಎಂ.ಎನ್. ಅನುಚೇತ್ ಅಧಿಕಾರ ಗ್ರಹಣ

(ನ್ಯೂಸ್‌ ಕಡಬ) newskadaba.com,  ಜೂ.25 ಬೆಂಗಳೂರು: ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನೂತನ ಆಯುಕ್ತರಾಗಿ ಹಿರಿಯ ಐಪಿಎಸ್ ಅಧಿಕಾರಿ ಎಂ.ಎನ್. ಅನುಚೇತ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಇದುವರೆಗೆ ಆಯುಕ್ತರಾಗಿದ್ದ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಅವರು ಅನುಚೇತ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ವಾರ್ತಾ ಇಲಾಖೆಯೊಂದಿಗೆ ಯುವ ಜನ ಸೇವೆ ಹಾಗೂ ಕ್ರೀಡಾ ಇಲಾಖೆಯ ಆಯುಕ್ತರ ಹೆಚ್ಚುವರಿ ಜವಾಬ್ದಾರಿಯನ್ನೂ ಸರ್ಕಾರ ಇವರಿಗೆ ವಹಿಸಿದೆ.

ಮೂಲತಃ ಕೋಲಾರ ಜಿಲ್ಲೆಯವರಾದ ಇವರು, 2006ರಲ್ಲಿ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಮುಗಿಸಿದ್ದು, ತಾಂತ್ರಿಕ ಹಿನ್ನೆಲೆ ಹೊಂದಿದ್ದಾರೆ. 2009ರ ಬ್ಯಾಚ್‌ನ ಕರ್ನಾಟಕ ವೃಂದದ ಐಪಿಎಸ್ ಅಧಿಕಾರಿಯಾಗಿದ್ದಾರೆ.

ಬೆಂಗಳೂರು ನಗರ ಸಂಚಾರಿ ವಿಭಾಗದ ಜಂಟಿ ಕಮಿಷನರ್ ಆಗಿದ್ದ ಅವಧಿಯಲ್ಲಿ, ನಗರದ ಸಂಚಾರ ನಿಯಂತ್ರಣಕ್ಕಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಅಳವಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅತ್ಯುತ್ತಮ ತನಿಖಾ ಪದಕ ನೀಡಿ ಗೌರವಿಸಿದೆ. ಈ ಹಿಂದೆ ಪುತ್ತೂರಿನ ಎಎಸ್‌ಪಿ, ಸಿಐಡಿ ಹಾಗೂ ಚಿತ್ರದುರ್ಗದ ಎಸ್ಪಿಯಾಗಿ, ಬೆಂಗಳೂರಿನ ಪಶ್ಚಿಮ ಮತ್ತು ಕೇಂದ್ರ ವಿಭಾಗದ ಡಿಸಿಪಿಯಾಗಿ ಹಾಗೂ ಪೊಲೀಸ್ ನೇಮಕಾತಿ ವಿಭಾಗದ ಡಿಐಜಿಪಿಯಾಗಿ ಕಾರ್ಯನಿರ್ವಹಿಸಿದ ವ್ಯಾಪಕ ಅನುಭವ ಹೊಂದಿದ್ದಾರೆ.

Scroll to Top