(ನ್ಯೂಸ್ ಕಡಬ) newskadaba.com, ಆ.22 ಹರಿಯಾಣ : ಭಾರತದ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಯುಪಿಎಸ್ಸಿ ಪರೀಕ್ಷೆಯು ಒಂದಾಗಿದೆ. ಸಾಧಿಸುವ ಛಲವಿದ್ದರೆ ಈ ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅಸಾಧ್ಯದ ಮಾತಲ್ಲ ಎಂಬುದಕ್ಕೆ ಐಎಎಸ್ ಅಧಿಕಾರಿ ಡಾ. ಶೇಣಾ ಅಗರ್ವಾಲ್ ಅವರ ಜೀವನದ ಪಯಣವೇ ಜೀವಂತ ನಿದರ್ಶನ.
ಇವರ ಜೀವನಯಾತ್ರೆ ಧೈರ್ಯ, ದೃಢ ನಿಶ್ಚಯ ಮತ್ತು ಸಮಾಜ ಸೇವೆಯ ಮಹತ್ವವನ್ನು ಪ್ರತಿಬಿಂಬಿಸುವ ಕಥೆಯಾಗಿದೆ. ಹರಿಯಾಣದ ಯಮುನಾ ನಗರದಲ್ಲಿ ಜನಿಸಿದ ಮತ್ತು ಬೆಳೆದ ಶೇಣಾ, ಬಾಲ್ಯದಿಂದಲೇ ಶೈಕ್ಷಣಿಕವಾಗಿ ಅತ್ಯುತ್ತಮ ಪ್ರತಿಭಾವಂತರಾಗಿದ್ದರು. ಇವರು 10ನೇ ತರಗತಿಯಲ್ಲಿ 95% ಮತ್ತು 12ನೇ ತರಗತಿಯಲ್ಲಿ 92% ಅಂಕಗಳನ್ನು ಗಳಿಸಿದರು. 2004 ರಲ್ಲಿ ಸಿಬಿಎಸ್ಇ ಪೂರ್ವ ವೈದ್ಯಕೀಯ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದು, ಅವರು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದರು. ನಂತರ 2009 ರಲ್ಲಿ ನವದೆಹಲಿಯ ಪ್ರಸಿದ್ಧ ಎಐಎಂಎಸ್ ವೈದ್ಯಕೀಯ ಕಾಲೇಜಿನಿಂದ ಎಂ.ಬಿ.ಬಿ.ಎಸ್ ಪದವಿ ಪಡೆದರು.
ಶೇಣಾ ಅಗರ್ವಾಲ್ ಕುಟುಂಬದಲ್ಲಿ ಬಹುತೇಕ ಮಂದಿ ವೈದ್ಯಕೀಯ ವೃತ್ತಿಯಲ್ಲಿ ಇದ್ದರು. ಆದರೂ ಅವರು ವೈದ್ಯಕೀಯ ವೃತ್ತಿಯಲ್ಲಿ ಮುಂದುವರಿಯದೆ, ತಮ್ಮ ಜೀವನದ ಗುರಿಯನ್ನು ಇನ್ನೊಂದು ದಿಕ್ಕಿಗೆ ತಿರುಗಿಸಿದರು. ಗ್ರಾಮೀಣ ಭಾರತದ ಜನಜೀವನವನ್ನು ಸುಧಾರಿಸುವ ಉದ್ದೇಶದಿಂದ, ವೈದ್ಯೆ ಎಂಬ ಪರಿಚಯವನ್ನು ಬದಿಗೊತ್ತಿ ನಾಗರಿಕ ಸೇವೆಯ ಕಡೆ ಹೆಜ್ಜೆ ಇಟ್ಟರು. ಇದು ಸುಲಭದ ನಿರ್ಧಾರವಾಗಿರಲಿಲ್ಲ, ಏಕೆಂದರೆ ಯುಪಿಎಸ್ಸಿ ಪರೀಕ್ಷೆಯ ಸ್ಪರ್ಧೆ ತೀವ್ರವಾಗಿದ್ದು, ಸಾಕಷ್ಟು ತಯಾರಿ ಹಾಗೂ ನಿರಂತರ ಶ್ರಮದ ಅಗತ್ಯವಿತ್ತು.
2010 ರಲ್ಲಿ ಇವರು ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆಯುವುದರ ಮೂಲಕ ಪ್ರಯತ್ನ ಆರಂಭಿಸುತ್ತಾರೆ. ಮತ್ತು ಅಖಿಲ ಭಾರತ ರ್ಯಾಂಕ್ 305 ಸ್ಥಾನವನ್ನು ಪಡೆದರು. ಆದರೆ ಅದು ಸಾಕಷ್ಟೆಂದು ಶೇಣಾ ಭಾವಿಸಲಿಲ್ಲ. ಅವರು ತಮ್ಮ ಪ್ರಯತ್ನವನ್ನು ಮುಂದುವರಿಸಿ, ಮೂರನೇ ಬಾರಿಗೆ 2011 ರಲ್ಲಿ ಅದ್ಭುತ ಸಾಧನೆ ಮಾಡಿದರು. ಈ ಬಾರಿ ಅವರು ಅಖಿಲ ಭಾರತ ಮೊದಲ ಸ್ಥಾನವನ್ನು (AIR 1) ಪಡೆದರು. ಇದು ಅವರಿಗೆ ಮಾತ್ರವಲ್ಲ, ದೇಶದ ಯುವಜನತೆಗೆ ದೊಡ್ಡ ಸ್ಪೂರ್ತಿಯಾಯಿತು.
ಯುಪಿಎಸ್ಸಿ ತೇರ್ಗಡೆ ನಂತರ, ಡಾ. ಶೇಣಾ ಅಗರ್ವಾಲ್ ಅವರು ವಿವಿಧ ಹುದ್ದೆಗಳಲ್ಲಿ ಸರ್ಕಾರದ ಸೇವೆ ಸಲ್ಲಿಸಿದರು. ಲುಧಿಯಾನ ಪುರಸಭೆಯ ಹೆಚ್ಚುವರಿ ಆಯುಕ್ತರು, ಮತ್ತು ಜಿಲ್ಲೆಯ ಹೆಚ್ಚುವರಿ ಉಪ ಆಯುಕ್ತರಾಗಿ ಕೆಲಸ ಮಾಡಿದರು. ಇದೀಗ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಸಾಮಾಜಿಕ ಭದ್ರತಾ ಇಲಾಖೆಯಲ್ಲಿ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪತಿ ಸನ್ಯಾಮ್ ಅಗರ್ವಾಲ್ ಕೂಡ ಭಾರತೀಯ ನಾಗರಿಕ ಸೇವೆಯಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯಲ್ಲಿ ವಿಶೇಷ ಕಾರ್ಯದರ್ಶಿಯ ಹುದ್ದೆ ನಿರ್ವಹಿಸುತ್ತಿದ್ದಾರೆ.
ಡಾ. ಶೇಣಾ ಅಗರ್ವಾಲ್ ಅವರ ಜೀವನ ಕೇವಲ ವೈಯಕ್ತಿಕ ಯಶಸ್ಸಿನ ಕಥೆಯಲ್ಲ. ಇದು ದೇಶ ಸೇವೆಗೆ ಅಂಕಿತಗೊಳ್ಳುವ ಮನಸ್ಸು, ಪರಿಶ್ರಮ ಮತ್ತು ತ್ಯಾಗದ ಕಥೆಯಾಗಿದೆ. ಇವರು ತಮ್ಮ ದೈನಂದಿನ ಕರ್ತವ್ಯಗಳಲ್ಲಿ ತೋರಿಸುತ್ತಿರುವ ನಿಷ್ಠೆ, ಹೊಸ ತಲೆಮಾರಿಗೆ ಸ್ಪೂರ್ತಿಯಾಗಿರುತ್ತದೆ.









