ಕೊಚ್ಚಿ ಶಿಪ್ ಯಾರ್ಡ್ ನಲ್ಲಿ ಸ್ಫೋಟ ► ಐವರು ಮೃತ್ಯು, ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ಕೊಚ್ಚಿ, ಫೆ.13. ಕೇರಳದ ಕೊಚ್ಚಿ ಶಿಪ್ ಯಾರ್ಡ್ ನಲ್ಲಿ ನಿಲ್ಲಿಸಲಾಗಿದ್ದ ಒಎನ್ ಜಿಸಿ ಸಂಸ್ಥೆಗೆ ಸೇರಿದ ಡ್ರಿಲ್ ಶಿಪ್ ‘ಸಾಗರ್ ಭೂಷಣ್’ ನೌಕೆಯ ಇಂಧನ ಟ್ಯಾಂಕರ್ ನಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 5 ಮಂದಿ ಮೃತಪಟ್ಟು ಕನಿಷ್ಠ 11 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮಂಗಳವಾರ ಬೆಳಗ್ಗೆ ಸಾಗರ್ ಭೂಷಣ್ ನೌಕೆ ದುರಸ್ತಿಗಾಗಿ ಕೊಚ್ಚಿ ಬಂದರಿನಲ್ಲಿ ಲಂಗರು ಹಾಕಿತ್ತು. ನೌಕೆಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲೇ ಇಂಧನ ಟ್ಯಾಂಕ್ ಬಳಿ ಸ್ಫೋಟ ಸಂಭವಿಸಿದ್ದು, ಸ್ಫೋಟಕ್ಕೆ ಶಂಕಿತ ಇಂಧನ ಸೋರಿಕೆ ಕಾರಣವಾಗಿರಬಹುದು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ವಾಹನಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಸ್ಫೋಟ ಸಂಭವಿಸಿದ್ದ ವೇಳೆ ನೌಕೆಯಲ್ಲಿ 20ಕ್ಕೂ ಹೆಚ್ಚು ಸಿಬ್ಬಂದಿ ಇದ್ದರು ಎಂದು ಹೇಳಲಾಗುತ್ತಿದ್ದು, ಗಾಯಾಳುಗಳನ್ನು ಕೊಚ್ಚಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಂತೆಯೇ ನೌಕೆಯೊಳಗೆ ಇನ್ನೂ ಇಬ್ಬರು ಸಿಬ್ಬಂದಿ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

Also Read  ಸುಳ್ಯ : ವಿವಾಹದಲ್ಲಿ ಭಾಗವಹಿಸಿದವರಿಗೆ ಹೋಂ ಕ್ವಾರಂಟೇನ್

error: Content is protected !!
Scroll to Top