ಕೆಲಸ ಕಳೆದುಕೊಂಡರು ಬರುತ್ತೆ ಸಂಬಳ !➤ ನಿರುದ್ಯೋಗ ಭತ್ಯೆ ನೀಡಲು ಮುಂದಾದ ಕೇಂದ್ರ ಸರ್ಕಾರ

(ನ್ಯೂಸ್ ಕಡಬ) newskadaba.com.ನವದೆಹಲಿ, ಆ.21: ಕರೊನಾ ಸಂಕಷ್ಟ ಅಥವಾ ಇತರ ಕಾರಣಗಳಿಂದಾಗಿ ಕೆಲಸ ಕಳೆದುಕೊಂಡವರಿಗೆ ಕೇಂದ್ರ ಸರ್ಕಾರ ನಿರುದ್ಯೋಗ ಭತ್ಯೆಯನ್ನು ನೀಡಲು ಮುಂದಾಗಿದೆ.

ವಿವಿಧ ಕೈಗಾರಿಕೆಗಳಲ್ಲಿ ಕೆಲಸ ಮಾಡುವ, ಇಎಸ್ಐ ವಿಮಾದಾರರಾಗಿರುವ ನೌಕರರು ಮೂರು ತಿಂಗಳ ಸರಾಸರಿ ಸಂಬಳದ ಶೇ.50 ರಷ್ಟು ಮೊತ್ತವನ್ನು ನಿರುದ್ಯೋಗ ಭತ್ಯೆಯನ್ನಾಗಿ ಪಡೆಯಬಹುದು. ಇದಕ್ಕೆ ನೌಕರರೇ ನೇರವಾಗಿ ಅರ್ಜಿ ಸಲ್ಲಿಸಬಹುದು. 2020 ಮಾರ್ಚ್ 24ರಿಂದ ಡಿಸೆಂಬರ್ 31 ಅವಧಿಯಲ್ಲಿ ಈಗಾಗಲೇ ಕೆಲಸ ಕಳೆದುಕೊಂಡಿರುವ ಹಾಗೂ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ ನೌಕರರು ಇದರ ಪ್ರಯೋಜನ ಪಡೆಯಬಹುದು.

ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ನೇತೃತ್ವದಲ್ಲಿ ನಡೆದ ಕಾರ್ಮಿಕರ ರಾಜ್ಯ ವಿಮಾ ಸಂಸ್ಥೆಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಯೋಜನೆಯಡಿ ಕೊನೆಯದಾಗಿ ಪಡೆದ ಸಂಬಳದ ಶೇ.50ಕ್ಕೆ ಸಮಾನವಾಗಿ ಆರ್ಥಿಕ ನೆರವನ್ನು ಮೂರು ತಿಂಗಳ ಅವಧಿಗೆ ನೀಡಲಾಗುತ್ತದೆ ಎಂದು ಇಎಸ್ಐಸಿ ಮಂಡಳಿ ಸದಸ್ಯೆ ಅಮರ್ಜೀತ್ ಕೌರ್ ಮಾಹಿತಿ ನೀಡಿದ್ದಾರೆ.

ಮಾಸಿಕ 21,000 ರೂ.ವರೆಗೆ ಸಂಬಳ ಪಡೆಯುವವರು ಇಎಸ್ಐ ವಿಮಾ ವ್ಯಾಪ್ತಿಗೆ ಬರುತ್ತಾರೆ. ಪ್ರತಿ ತಿಂಗಳು ಆರೋಗ್ಯ ಸೇವೆಗಾಗಿ ಕಂತುಗಳನ್ನು ಕಟ್ಟುತ್ತಿರುತ್ತಾರೆ. ಇದಕ್ಕಾಗಿ ಇವರನ್ನು ವಿಮಾದಾರರು ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ವಿಮಾದಾರರಾಗಿರುವ ಮಹಿಳೆಯರು ಬಾಣಂತನದ ರಜೆಯಲ್ಲಿದ್ದಾಗ ಸಂಬಳವನ್ನು ಇಎಸ್ಐ ಮೂಲಕವೇ ನೀಡಲಾಗುತ್ತದೆ. ಎರಡು ವರ್ಷದಿಂದ ಉದ್ಯೋಗದಲ್ಲಿದ್ದು, ಕನಿಷ್ಠ ಮೂರು ತಿಂಗಳ ವಿಮೆ ಪಾವತಿಸಿದವರು ಯೋಜನೆಗೆ ಅರ್ಹರಾಗಿದ್ದಾರೆ. ಹೆಚ್ಚಿನ ಮಾಹಿತಿಗೆ ಸ್ಥಳೀಯ ಇಎಸ್ಐ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. .ಅಂದಾಜು 40 ಲಕ್ಷ ಕಾರ್ಮಿಕರು ಪ್ರಯೋಜನ ಪಡೆಯಬಹುದಾದ ನಿರೀಕ್ಷೆ ಇದೆ.

error: Content is protected !!

Join the Group

Join WhatsApp Group