ರಸ್ತೆ ಬದಿ ಸ್ಕೂಟರ್‌ ನಿಲ್ಲಿಸಿ ನಿದ್ದೆಗೆ ಜಾರಿದ ಸವಾರ – ಎದ್ದು ನೋಡಿದಾಗ ಸ್ಕೂಟರ್‌ ಕಳ್ಳತನ

(ನ್ಯೂಸ್ ಕಡಬ) newskadaba.com ಕಾಪು, ಫೆ. 14. ರಸ್ತೆ ಬದಿಯಲ್ಲಿ ಸ್ಕೂಟರ್‌ ನಿಲ್ಲಿಸಿ ಪಕ್ಕದಲ್ಲಿ ಮಲಗಿ ನಿದ್ರಿಸಿದ್ದ ಸವಾರನಿಗೆ ತಿಳಿಯದಂತೆ ಸ್ಕೂಟರ್‌ ಸಹಿತ ಬೆಲೆ ಬಾಳುವ ಸೊತ್ತುಗಳನ್ನು ಕಳ್ಳರು ಕದ್ದೊಯ್ದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೊಪ್ಪಲಂಗಡಿ ಎಂಬಲ್ಲಿ ನಡೆದಿದೆ.

ಸ್ಕೂಟರ್ ಸವಾರ ಕಾರ್ಕಳ ಮುಡಾರು ಗ್ರಾಮದ ಚೇತನ್‌ ಎಂಬಾತ ಫೆ. 11ರಂದು ಮಧ್ಯರಾತ್ರಿ 12 ಗಂಟೆಯ ವೇಳೆಗೆ ರಾ.ಹೆ. 66ರ ಮೂಲಕ ಸುರತ್ಕಲ್‌ಗೆ ಹೋಗುತ್ತಿದ್ದಾಗ ಕೊಪ್ಪಲಂಗಡಿ ಬಳಿ ಬರುತ್ತಿದ್ದಂತೆ ನಿದ್ದೆ ಬಂದು ಸ್ಕೂಟರ್‌ ಸವಾರಿ ಮಾಡಲು ಕಷ್ಟವಾಗಿದ್ದು, ಅಲ್ಲೇ ಇದ್ದ ದರ್ಗಾದ ಬದಿಯಲ್ಲಿ ಸ್ಕೂಟರನ್ನು ನಿಲ್ಲಿಸಿ ಮಲಗಿದ್ದರು. ಬಳಿಕ ಚೇತನ್‌ ಅವರಿಗೆ 2.30ರ ವೇಳೆಗೆ ಎಚ್ಚರವಾದಾಗ ಅವರ ಸ್ಕೂಟರ್‌, ಮೊಬೈಲ್‌ ಹಾಗೂ ದಾಖಲೆಗಳಿದ್ದ ಪರ್ಸ್‌ ಕಾಣೆಯಾಗಿತ್ತು. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Scroll to Top