ದ್ವೇಷಭಾಷಣ ಪ್ರಕರಣ – ತನಿಖೆಗೆ ಹಾಜರಾಗಲು ಬಾಬಾ ರಾಮ್ ದೇವ್ ಗೆ ಹೈಕೋರ್ಟ್ ಸೂಚನೆ

(ನ್ಯೂಸ್ ಕಡಬ) newskadaba.com ಜೈಪುರ, ಸೆ. 13. ದ್ವೇಷಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗಾಗಿ ಅಕ್ಟೋಬರ್ 5 ರಂದು ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಯೋಗಗುರು ರಾಮ್ ದೇವ್ ಗೆ ರಾಜಸ್ಥಾನ ಹೈಕೋರ್ಟ್ ಸೂಚನೆ ನೀಡಿದೆ.

ಇದರ ಜೊತೆಗೆ ಅವರ ಬಂಧನಕ್ಕೆ ಏಪ್ರಿಲ್ 13ರಂದು ವಿಧಿಸಿದ್ದ ತಡೆಯಾಜ್ಞೆಯನ್ನು ಅಕ್ಟೋಬರ್ 16ರವರೆಗೆ ವಿಸ್ತರಿಸಿದೆ ಎನ್ನಲಾಗಿದೆ. ತನಿಖಾಧಿಕಾರಿಗಳು ರಾಮ್ ದೇವ್ ಅವರನ್ನು ವಿಚಾರಣೆಗಾಗಿ ಕರೆದಾಗಲೆಲ್ಲ ಅವರು ಹಾಜರಾಗಬೇಕು ಎಂದು ನ್ಯಾಯಮೂರ್ತಿ ಕುಲದೀಪ್ ಮಾಥುರ್ ಅವರಿದ್ದ ನ್ಯಾಯಪೀಠವು ಸೂಚನೆ ನೀಡಿದೆ. ಮುಂದಿನ ವಿಚಾರಣೆ ನಡೆಯುವ ಅಕ್ಟೋಬರ್ 16ರಂದು ಕೇಸ್ ಡೈರಿಯನ್ನು ನ್ಯಾಯಾಲಯಕ್ಕೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಲು ಸರ್ಕಾರಿ ಅಭಿಯೋಜಕರಿಗೆ ಕೋರ್ಟ್ ಸೂಚಿಸಿದೆ.

Scroll to Top