ಫೆ. 24, 25 ರಂದು ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳ ► ನೇತ್ರಾವತಿ ನದಿ ಕಿನಾರೆಯಲ್ಲಿ ಕಂಬಳಕ್ಕಾಗಿ ನಡೆಯಿತು ಕರೆ ಮುಹೂರ್ತ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ.07. ವಿಜಯ-ವಿಕ್ರಮ ಜೋಡುಕರೆ ಕಂಬಳವು ಫೆ.24 ಮತ್ತು ಫೆ.25ರಂದು ನಡೆಯಲಿರುವುದರಿಂದ ಹಳೆಗೇಟು ದಡ್ಡುವಿನ ಶ್ರೀ ರಾಜನ್ ದೈವ ಕಲ್ಕುಡಕಟ್ಟೆಯ ಬಳಿ ಇರುವ  ನೇತ್ರಾವತಿ ನದಿ ಕಿನಾರೆಯ ಕಂಬಳ ಕರೆಯಲ್ಲಿ ಭಾನುವಾರ ಕಂಬಳಕ್ಕಾಗಿ ಕರೆ ಮುಹೂರ್ತ ನಡೆಯಿತು.

ಕರೆ ಮುಹೂರ್ತ ನೆರವೇರಿಸಿ ಮಾತನಾಡಿದ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ, ಕಂಬಳ ಪರ ಕಾನೂನು ಹೋರಾಟಗಾರ ಅಶೋಕ್ ಕುಮಾರ್ ರೈ ಕೋಡಿಂಬಾಡಿ ರಾಜ್ಯ ಹಾಗೂ ಕೇಂದ್ರ ಸರಕಾರದ ಸ್ಪಂದನೆಯಿಂದಾಗಿ ಕಳೆದ ಎರಡು ವರ್ಷಗಳಿಂದ ಕಂಬಳ ಕ್ರೀಡೆಗಿದ್ದ ಅಡೆತಡೆ ಈ ಬಾರಿ ನಿವಾರಣೆಯಾಗಿದೆ. ಈ ಬಾರಿಯ ವಿಜಯ- ವಿಕ್ರಮ ಕಂಬಳವನ್ನು ಹಲವು ವೈಶಿಷ್ಟ್ಯಗಳೊಂದಿಗೆ ಅದ್ದೂರಿಯಾಗಿ ನಡೆಸಲು ಉದ್ದೇಶಿಸಲಾಗಿದ್ದು, ಸುಮಾರು ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಕಂಬಳದಲ್ಲಿ ಸುಮಾರು 150 ಜೊತೆ ಕೋಣಗಳೂ ಭಾಗವಹಿಸಲಿವೆ. ಕಂಬಳವು ತುಳುನಾಡ ಸಂಸ್ಕೃತಿಯಾಗಿದ್ದು, ಜಾತಿ, ಮತ, ರಾಜಕೀಯ ಬೇಧ ಮರೆತು ಎಲ್ಲರೂ ಒಂದಾಗಿ ಅದನ್ನು ಉಳಿಸಲು ಮುಂದಾಗಬೇಕು. ಸರ್ವರ ಸಹಕಾರ ದೊರೆತಾಗ ಮಾತ್ರ ತುಳುನಾಡ ಸಂಸ್ಕೃತಿಯ ಗತ ಇತಿಹಾಸ ಮತ್ತೆ ಅನಾವರಣಗೊಳ್ಳಲು ಸಾಧ್ಯ ಎಂದರು.

ಕರೆ ಮುಹೂರ್ತದ ಬಳಿಕ ಕಟ್ಟಡ ಕಾರ್ಮಿಕರ ಸಂಘದವರು ಹಾಗೂ ಸಾರ್ವಜನಿಕರು ಕಂಬಳ ಕರೆಯಲ್ಲಿ ಶ್ರಮದಾನ ನಡೆಸಿದರು. ವಿಜಯ ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ ನಂದಾವರ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಕೈಪ ಬೆಳ್ಳಿಪ್ಪಾಡಿ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಉಪಾಧ್ಯಕ್ಷ ವಿಠಲ ಶೆಟ್ಟಿ ಕುಲ್ಲೊಟ್ಟು,  ಕಾರ್ಯದರ್ಶಿ ಚಂದ್ರಶೇಖರ ಮಡಿವಾಳ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.
Scroll to Top