ಹೊಸಮಠ ಸಿಎ ಬ್ಯಾಂಕ್: 2018ರ ಕ್ಯಾಲೆಂಡರ್ ಬಿಡುಗಡೆ

(ನ್ಯೂಸ್ ಕಡಬ) newskadaba.com ಕಡಬ, ಜ.02. ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 2018ನೇ ವರ್ಷದ ಕ್ಯಾಲೆಂಡರ್ನ್ನು ಆಡಳಿತ ಮಂಡಳಿ ಅಧ್ಯಕ್ಷ ಕರುಣಾಕರ ಗೋಗಟೆ ಇತ್ತೀಚೆಗೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಸಂಘದಿಂದ ಸದಸ್ಯರಿಗೆ ಸಂಪುರ್ಣ ಸಾಲ ಸೌಲಭ್ಯ ಒದಗಿಸುವುದರೊಂದಿಗೆ ಸಂಘದ ಅಭಿವೃದ್ದಿಗೆ ಅವಿರತ ಶ್ರಮಿಸಲಾಗುತ್ತಿದೆ ಅಲ್ಲದೆ ಸಂಘದ ಸದಸ್ಯರ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಎಲ್ಲಾ ರೀತಿಯ ಅಭಿವೃದ್ದಿಗೆ ಸಂಘವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ಸದಸ್ಯರು ಸಂಘದಿಂದ ಪಡೆದುಕೊಂಡ ಸಾಲವನ್ನು ಸಕಾಲಕ್ಕೆ ಪಾವತಿಸುವುದರೊಂದಿಗೆ ಸಹಕರಿಸಬೇಕೆಂದು ಹೇಳಿದರು.

ಕೇಪು ಅಂಗನವಾಡಿಗೆ ಮೇಜು ಹಾಗೂ ವಾಳ್ಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮಿಕ್ಸರ್ ಗ್ರೈಂಡರನ್ನು ಕೊಡುಗೆಯಾಗಿ ನೀಡಲಾಯಿತು. ಕೊಡುಗೆಯನ್ನು ಸ್ವೀಕರಿಸಿದ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ಸದಸ್ಯರುಗಳಾದ ಶಿವಪ್ರಸಾದ್ ಮೈಲೇರಿ, ವಿದ್ಯಾ ಗೋಗಟೆ ಹಾಗೂ ವಾಳ್ಯ ಪ್ರಾಥಮಿಕ ಶಾಲೆ ಉಪಧ್ಯಾಯಿನಿ ಮಂಜುಳ ಸಂಘಕ್ಕೆ ಅಭಿನಂದನೆ ಹಾಗೂ ಶುಭಹಾರೈಸಿದರು. ಈ ಸಂಧರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶಿವಪ್ರಸಾದ್ ಪುತ್ತಿಲ, ನಿರ್ದೇಶಕರುಗಳಾದ ಶಶಾಂಕ ಗೋಖಲೆ, ಪದ್ಮಯ್ಯಪುಜಾರಿ, ಜಯಚಂದ್ರ ರೈ ಕುಂಟೋಡಿ, ಕೃಷ್ಣಪ್ಪ ದೇವಾಡಿಗ, ನೀಲಯ್ಯ ಬನಾರಿ, ಸೀತಮ್ಮ ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೋಮಸುಂದರ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

Scroll to Top