ದೇವರಗದ್ದೆ: ಇಂದಿನಿಂದ ಪ್ರತಿಷ್ಠಾ ಕಲಶಾಭಿಷೇಕ- ನೇಮೋತ್ಸವ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ. 13. ಸುಬ್ರಹ್ಮಣ್ಯ ಗ್ರಾಮದ ಅಗರಿಕಜೆ-ದೇವರಗದ್ದೆ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ಮತ್ತು ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ಮತ್ತು ಶ್ರೀ ಸ್ವಾಮಿ ಕೊರಗಜ್ಜ ದೈವದ ಪುನರ್ ಪ್ರತಿಷ್ಠೆ, ಹಾಗೂ ಸಿರಿ ಸಿಂಗಾರ ನೇಮೋತ್ಸವ ಫೆ.14ರಿಂದ ಫೆ.16ರ ವರೆಗೆ ಜರುಗಲಿದೆ.

 

ವೇದಮೂರ್ತಿ ರಘುರಾಮ ಅಮ್ಮಣ್ಣಾಯ ಸುಬ್ರಹ್ಮಣ್ಯ ಅವರ ನೇತ್ರತ್ವದಲ್ಲಿ ವೈಧಿಕ, ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಫೆ.14ರಂದು ಋತ್ವಿಜರ ಆಗಮನೊಂದಿಗೆ ಉಗ್ರಾಣ ಮುಹೂರ್ತ ನೆರವೇರಿ, ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದೆ. ಫೆ.15ರಂದು ಮುಂಜಾನೆ ದ್ವಾದಶ ನಾರಿಕೇಳ ಗಣಹೋಮ, ಪ್ರತಿಷ್ಠಾ ಹೋಮ, ಪಂಚವಿಂಶತಿ ಕಲಶ ಸ್ಥಾಪನೆ, ಕಲಶ ಪೂಜೆ, ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ, ಶ್ರೀ ಸತ್ಯದೇವತೆ ತನ್ನಿ ಮಾನಿಗ ಹಾಗೂ ಶ್ರೀ ಸ್ವಾಮಿ ಕೊರಗಜ್ಜ ದೈವದ ಪ್ರತಿಷ್ಠೆ, ಕಲಶಾಭಿಷೇಕ ಮತ್ತು ದೈವಗಳಿಗೆ ತಂಬಿಲ ನಡೆದು ಮದ್ಯಾಹ್ನ ಮಹಾಪೂಜೆ ನಡೆಯಲಿದೆ. ರಾತ್ರಿ ಶ್ರೀ ಆದಿ ಮೊಗೇರ್ಕಳರು ಭಂಡಾರ ಹಿಡಿದು ಗರಡಿ ಇಳಿಯುವುದು, ಬಳಿಕ ಸತ್ಯ ದೇವತೆ ತನ್ನಿ ಮಾನಿಗ ಗರಡಿ ಇಳಿಯುವುದು. ಫೆ.16ರಂದು ಬೆಳಗ್ಗೆ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ. ಸಾಂಸ್ಕತಿಕ ಕಾರ್ಯಕ್ರಮದ ಅಂಗವಾಗಿ ಫೆ.14ರಂದು ಸಂಜೆ ಭಜನೆ, ಸ್ಯಾಕ್ಸೋಫೋನ್ ವಾದನ, ನೃತ್ಯ ವೈಭವ, ಸಂಗೀತ ಗಾನ ಸಂಭ್ರಮ ನಡೆಯಲಿದೆ. ಫೆ.15ರಂದು ಸಂಜೆ ಧಾರ್ಮಿಕ ಸಭೆ ನಡೆದು ಭಕ್ತಿ ಸಂಗೀತಾ, ಕಲಾ ವೈಭವ ನಡೆಯಲಿದೆ.

Scroll to Top