ಕತ್ತು ಕೊಯ್ದು ಪತ್ನಿಯನ್ನ ಕೊಲೆಗೈದ ಪಾಪಿ ಪತಿ.!

(ನ್ಯೂಸ್ ಕಡಬ) newskadaba.com ಹಾಸನ ನ. 01: ಹೆಂಡತಿಯ ಕತ್ತು ಕೊಯ್ದು ಗಂಡನೇ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕೊಂಗಲಬೀಡು ಗ್ರಾಮದ ಬಳಿ ನಡೆದಿದೆ. ಶಾಲಿನಿ ಪತಿಯಿಂದಲೇ ಕೊಲೆಯಾದ ಮಹಿಳೆ. ಆರೋಪಿ ಪತಿ ಪುನೀತ್  ಸಂಜೆ  ಕಾರ್ಯಕ್ರಮಕ್ಕೆ ಹೋಗೋಣ ಎಂದು ಹೇಳಿ ಶಾಲಿನಿಯನ್ನ ಮನೆಯಿಂದ ಕರೆದುಕೊಂಡು ಬಂದಿದ್ದಾನೆ.

 

ಹಳ್ಳಿಮೈಸೂರು ರಸ್ತೆಯ ಕೊಂಗಲಬೀಡು ಗ್ರಾಮದ ಸಮೀಪ ಪತ್ನಿಯ ಕತ್ತನ್ನು ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಗ್ರಾಮಸ್ಥರು ಮಹಿಳೆಯ ರಕ್ಷಣೆಗೆ ಧಾವಿಸಿದ್ದಾರೆ. ರಕ್ಷಣೆಗೆ ಜನರು ಬರುತ್ತಿದ್ದಂತೆ ಪುನೀತ್ ಅವರ ಮೇಲೆಯೂ ಚಾಕುವಿನಿಂದ ದಾಳಿ ನಡೆಸಲು ಮುಂದಾಗಿದ್ದಾನೆ.

 

ಗ್ರಾಮಸ್ಥರು ಆರೋಪಿಯನ್ನು ಹಿಡಿದು ಕೊಠಡಿಯಲ್ಲಿ ಕೂಡಿ ಹಾಕಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಗರ ಠಾಣೆ ಪಿಎಸ್‍ಐ ಕುಮಾರ್ ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಇರಿತಕ್ಕೆ ಒಳಗಾಗಿದ್ದ ಶಾಲಿನಿ ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ.

 

Scroll to Top