(ನ್ಯೂಸ್ ಕಡಬ) newskadaba.com.ಮಂಗಳೂರು,ಜು.31: ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿ ಕೆಲಸ ನಿರ್ವಹಿಸುತ್ತಿದ್ದ ಭಾರತೀಯರು ಕೊರೊನಾದಿಂದಾಗಿ ತಮ್ಮ ತಾಯ್ನಾಡಿಗೆ ಕಷ್ಟುಪಟ್ಟು ಮರಳಿದ್ದಾರೆ. ಆದರೆ ಕುವೈತ್ನಿಂದ ಸ್ವದೇಶಕ್ಕೆ ಮರಳಿದ್ದ ಅನೇಕ ಭಾರತೀಯರಿಗೆ ಈಗ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಭಾರತ ಸಹಿತ ಏಳು ದೇಶಗಳ ಜನರ ಪ್ರವೇಶಕ್ಕೆ ಕುವೈತ್ ತಾತ್ಕಾಲಿಕ ತಡೆ ನೀಡಿದೆ. ಬಾಂಗ್ಲಾದೇಶ, ಇರಾನ್, ನೇಪಾಳ, ಪಾಕಿಸ್ತಾನ, ಫಿಲಿಫೈನ್ಸ್ ಮತ್ತು ಶ್ರೀಲಂಕಾ ನಿರ್ಬಂಧಕ್ಕೆ ಒಳಗಾಗಿರುವ ಇತರ ರಾಷ್ಟ್ರಗಳು. ಕುವೈತ್ ಸರ್ಕಾರದ ಸಂವಹನ ಕೇಂದ್ರವು ಟ್ವಿಟ್ಟರ್ನಲ್ಲಿ ಇದನ್ನು ಪ್ರಕಟಿಸಿದ್ದು, ಎಷ್ಟು ಸಮಯದವರೆಗೆ ಇದು ಅನ್ವಯವಾಗುತ್ತದೆ ಎಂದು ಕಾಲಮಿತಿ ನಿಗದಿಪಡಿಸಿಲ್ಲ. ನಿರ್ಬಂಧ ಪಟ್ಟಿಯಲ್ಲಿ ಇರದ ಇತರ ರಾಷ್ಟ್ರಗಳ ನಡುವೆ ಕುವೈತ್ ಆ.1ರಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರ ಪುನರಾರಂಭಿಸಲಿದೆ.

ವೀಸಾ ಅಮಾನ್ಯ ವಲಸಿಗರು ಆರು ತಿಂಗಳಿಗಿಂತ ಅಧಿಕ ದಿನ ಉದ್ಯೋಗದಲ್ಲಿ ಇರುವ ದೇಶದಿಂದ ಹೊರಗೆ ಇದ್ದರೆ ಅವರ ವೀಸಾ ತನ್ನಿಂತಾನೇ ರದ್ದುಗೊಳ್ಳುವುದು. ಕೆಲವರು ಲಾಕ್ಡೌನ್ ಮೊದಲೇ ರಜೆಯಲ್ಲಿ ಊರಿಗೆ ತೆರಳಿದವರು ಕೂಡ ಊರಿಗೆ ಮರಳಲು ಸಾಧ್ಯವಾಗಿಲ್ಲ. ಆರು ತಿಂಗಳು ಅವಧಿ ಮುಗಿದರೆ ಆ ವೀಸಾಕ್ಕೆ ಮಾನ್ಯತೆ ಇರುವುದಿಲ್ಲ. ಈಗಾಗಲೇ ಕುವೈತ್ನಲ್ಲಿ ಉದ್ಯೋಗಕ್ಕೆ ಸ್ಥಳೀಯರಿಗೆ ಆದ್ಯತೆ ಒದಗಿಸಲು ಆರಂಭಿಸಲಾಗಿದೆ. ಒಂದು ವೇಳೆ ಒಮ್ಮೆ ವೀಸಾ ಅವಧಿ ನಷ್ಟಗೊಂಡರೆ ಮತ್ತೆ ಉದ್ಯೋಗ ಪಡೆಯುವುದು ಭಾರತೀಯರಿಗೆ ಕಷ್ಟವಾಗಲಿದೆ. ಹೀಗಾದರೆ ಮತ್ತೆ ನಿರುದ್ಯೋಗ ಸಮಸ್ಯೆ ತಲೆದೂರುವ ಸಾಧ್ಯತೆ ಹೆಚ್ಚಿದೆ.






