ನಾಳೆಯಿಂದ ಬಸ್ ಸಂಚಾರಕ್ಕೆ ಅವಕಾಶ: ಬಿಎಸ್‌ವೈ

  • ರವಿವಾರ ಸಂಪೂರ್ಣ ಲಾಕ್‌ಡೌನ್

ಬೆಂಗಳೂರು, ಮೇ 18: ಕೆಎಸ್ಸಾರ್ಟಿಸಿ, ಬಿಎಂಟಿಸಿ, ವಾಯುವ್ಯ ಹಾಗೂ ಈಶಾನ್ಯ ಸಾರಿಗೆ ಬಸ್ ಸಂಚಾರ ಮೇ 19ರಂದು ಆರಂಭವಾಗಲಿದೆ. ಆದರೆ ರಾತ್ರಿ 7ರಿಂದ ಬೆಳಗ್ಗೆ 7ರವರೆಗೆ ಜನ, ಬಸ್ ಸಂಚಾರ ನಿಷೇಧವಿರಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ರಾಜ್ಯದಲ್ಲಿ ಖಾಸಗಿ ಬಸ್ ಸಂಚಾರಕ್ಕೂ ಅವಕಾಶ ನೀಡಲಾಗಿದ್ದು, ಬಸ್‌ನಲ್ಲಿ 30 ಜನರಿಗಷ್ಟೇ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು. ಕೆಂಪು ವಲಯ ಹಾಗೂ ಕಂಟೈನ್ಮೆಂಟ್ ಹೊರತುಪಡಿಸಿ ಉಳಿದೆಡೆ ಸಂಚಾರ ಆರಂಭವಾಗಲಿದೆ ಎಂದು ಹೇಳಿದರು.

ಆಟೊ, ಕ್ಯಾಬ್‌ಗಳಲ್ಲಿ ಚಾಲಕರ ಬಿಟ್ಟು ಇಬ್ಬರ ಪ್ರಯಾಣಕ್ಕೆ ಅವಕಾಶ ನೀಡಲಾಗಿದ್ದು, ಖಾಸಗಿ ಟ್ಯಾಕ್ಸಿಗೂ ಅವಕಾಶ ನೀಡಲಾಗುವುದು. ರಾಜ್ಯದೊಳಗೆ ಮಾತ್ರ ರೈಲು ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದರು.

ರಾಜ್ಯದಲ್ಲಿ ಸಲೂನ್, ಬ್ಯೂಟಿ ಪಾರ್ಲರ್ ಗಳನ್ನು ತೆರೆಯಲು ಅವಕಾಶ ನೀಡಲಾಗುವುದು ಎಂದು ಬಿಎಸ್‌ವೈ ಹೇಳಿದರು.ಬೀದಿ ಬದಿ ವ್ಯಾಪಾರಿಗಳು, ಅಂಗಡಿ ಮುಂಗಟ್ಟುಗಳನ್ನು ತೆರೆಯಬಹುದು.

ಕಬ್ಬನ್ ಪಾರ್ಕ್ ಲಾಲ್‌ಬಾಗ್ ಸೇರಿ ಎಲ್ಲ ಪಾರ್ಕ್‌ಗಳನ್ನು ಬೆಳಗ್ಗೆ 7ರಿಂದ 9 ಹಾಗೂ ಸಂಜೆ 5ರಿಂದ 7ರವರೆಗೆ ತೆರೆಯಲು ಅವಕಾಶ ನೀಡಲಾಗಿದೆ ಎಂದರು.
ಹೊಟೇಲ್‌ಗಳು, ಜಿಮ್‌ಗಳು, ಮಾಲ್‌ಗಳು, ಚಿತ್ರಮಂದಿರಗಳನ್ನು ತೆರಯಲು ಇನ್ನೂ ಅವಕಾಶ ನೀಡಲಾಗಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದರು.
ಅಲ್ಲದೆ ರವಿವಾರ ಸಂಪೂರ್ಣ ಲಾಕ್‌ಡೌನ್ ಇರಲಿದ್ದು, ಎಲ್ಲ ಮಳಿಗೆ, ವಾಹನ ಸಂಚಾರ ನಿಷೇಧ ಇರಲಿದೆ ಎಂದರು.

Scroll to Top