(ನ್ಯೂಸ್ ಕಡಬ) newskadaba.com, ಅ.11 ಕೊಚ್ಚಿ : ಚಿನ್ನಲೇಪನದ ವೇಳೆ ಶಬರಿಮಲೆ ದೇಗುಲದ ದ್ವಾರಪಾಲಕ ಮೂರ್ತಿ ಹಾಗೂ ಚೌಕಟ್ಟಿನ ಚಿನ್ನ ಕಳವಿಗೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಕೇರಳ ಹೈಕೋರ್ಟ್ ಶುಕ್ರವಾರ ರಾಜ್ಯ ಪೊಲೀಸರಿಗೆ ನಿರ್ದೇಶನ ನೀಡಿದೆ.
‘ದೇಗುಲ ಚೌಕಟ್ಟಿನ ಚಿನ್ನ ದುರುಪಯೋಗ ಆಗಿದೆ ಎಂಬುದು ಇಲ್ಲಿಯವರೆಗೆ ನಡೆಸಿದ ತನಿಖೆಯಿಂದ ತಿಳಿದುಬರುತ್ತದೆ. ಹೀಗಾಗಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ, ಈ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು’ ಎಂದು ಪೀಠ ಸೂಚಿಸಿದೆ.
‘ಚಿನ್ನಲೇಪನ ನಡೆಸಿದ ಬೆಂಗಳೂರು ಮೂಲದ ಉನ್ನಿಕೃಷ್ಣನ್ ಪೊಟ್ಟಿಗೆ ಗಣನೀಯ ಪ್ರಮಾಣದ ಚಿನ್ನವಾದ ಸುಮಾರು 474.9 ಗ್ರಾಂ ಅನ್ನು ಹಸ್ತಾಂತರಿಸಲಾಗಿದೆ ಎಂದು ವಿಚಕ್ಷಕ ವರದಿಯಿಂದ ಗೊತ್ತಾಗಿದೆ. ಆದರೆ ಅವರು ಈ ಚಿನ್ನವನ್ನು ದೇಗುಲಕ್ಕೆ ಮೆಳಿಸಿದರು ಎಂಬ ದಾಖಲೆಗಳಿಲ್ಲ’ ಎಂದು ಪೀಠ ಗಮನಿಸಿದೆ.










