(ನ್ಯೂಸ್ ಕಡಬ) newskadaba.com, ಸೆ.06 ಲಖನೌ: ಕಳೆದ 40 ದಿನಗಳ ಅವಧಿಯಲ್ಲಿ ಕಪ್ಪು ಬಣ್ಣದ ಹಾವೊಂದು ತನಗೆ 13 ಬಾರಿ ಕಚ್ಚಿದೆ ಎಂದು 15 ವರ್ಷದ ಬಾಲಕಿಯೊಬ್ಬಳು ದೂರು ನೀಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶ (Uttar Pradesh)ದ ಕೌಶಂಬಿ ಜಿಲ್ಲೆಯ ಬಸ್ತಿ ಭೈಸಾ ಎಂಬ ಸಣ್ಣ ಹಳ್ಳಿಯಲ್ಲಿ ನಡೆದಿದೆ. ಬಾಲಕಿಯ ಈ ಹೇಳಿಕೆಯಿಂದ ಗ್ರಾಮಸ್ಥರು ಭೀತಿಗೊಂಡಿದ್ದಾರೆ. ಅದೇ ಒಂದು ಹಾವು ತನಗೆ ಪದೇ ಪದೇ ಬಂದು ಕಚ್ಚುತ್ತಿದೆ ಎಂದು ಬಾಲಕಿ ಹೇಳಿದ್ದಾಳೆ.
ಸುಮಾರು 300 ಜನರು ವಾಸಿಸುವ ಕಾಲೋನಿಯ ನಿವಾಸಿಯಾಗಿರುವ ಆ ಹುಡುಗಿ, ಅದೇ ಹಾವು ಪದೇ ಪದೇ ತನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದ್ದಾಳೆ. ಕಪ್ಪು ಹಾವೊಂದು ನನ್ನನ್ನು ಹಿಂಬಾಲಿಸುತ್ತಿದೆ. ದಯವಿಟ್ಟು ನನ್ನನ್ನು ಉಳಿಸಿ ಎಂದು ಅವಳು ಬೇಡಿಕೊಂಡಿದ್ದಾಳೆ. ಪ್ರತಿ ಬಾರಿ ಅದು ಕಚ್ಚಿದಾಗಲೂ ವಿದ್ಯುತ್ ಆಘಾತದಂತೆ ಭಾಸವಾಗುತ್ತದೆ. ಅದರ ಹಲ್ಲಿನ ಗುರುತುಗಳು ನನ್ನ ದೇಹದ ಮೇಲೆ ಉಳಿಯುತ್ತವೆ ಎಂದು ಹೇಳಿದ್ದಾಳೆ.
ರಾತ್ರಿ ವೇಳೆ ಮನೆಯ ಬಾಗಿಲು ಮುಚ್ಚಿದ್ದರೂ, ಹಾವು ಹೇಗೋ ತಮ್ಮ ಮನೆಗೆ ಪ್ರವೇಶಿಸುತ್ತದೆ ಎಂದು ಕುಟುಂಬದವರು ಹೇಳಿಕೊಂಡಿದ್ದಾರೆ. ಅದು ಮನೆಯ ಒಳಗೆ ಮತ್ತು ಹೊರಗೆ ಅವಳ ಮೇಲೆ ದಾಳಿ ಮಾಡಿದೆ ಎಂದು ಹೇಳಲಾಗಿದೆ. ಬಾಲಕಿಯ ಪ್ರಕಾರ, ಹಾವು ದಾಳಿ ಮಾಡಿದಾಗಲೆಲ್ಲಾ ಅವಳು ಹಾವನ್ನು ನೋಡುತ್ತಿದ್ದುದಾಗಿ ಹೇಳಿದ್ದಾಳೆ.
ದಿನಗೂಲಿ ಕೃಷಿ ಕಾರ್ಮಿಕನಾಗಿರುವ ಆಕೆಯ ತಂದೆ ರಾಜೇಂದ್ರ, ಜುಲೈ 22 ರಂದು ಮೊದಲ ಹಾವು ಕಡಿತ ಸಂಭವಿಸಿದೆ ಎಂದು ಹೇಳಿದರು. ಅಂದಿನಿಂದ, ಅವರು ವೈದ್ಯಕೀಯ ಚಿಕಿತ್ಸೆಗಾಗಿ 4 ಲಕ್ಷ ರೂ.ಗಳಿಗೂ ಹೆಚ್ಚು ಖರ್ಚು ಮಾಡಿದ್ದಾರಂತೆ. ನಾವು ಹಾವು ಹಿಡಿಯುವವರಿಗೆ ಮನವಿ ಮಾಡಿದೆವು, ಆದರೆ ಯಾರೂ ಬರಲಿಲ್ಲ ಎಂದು ರಾಜೇಂದ್ರ ಬೇಸರ ವ್ಯಕ್ತಪಡಿಸಿದರು. ಕೆಲವೊಮ್ಮೆ ಅದು ಹೊಲಗಳಲ್ಲಿ ಅಡಗಿಕೊಳ್ಳುತ್ತದೆ, ಇನ್ನು ಕೆಲವೊಮ್ಮೆ ಮನೆಯಲ್ಲಿ ಅಡಗಿಕೊಳ್ಳುತ್ತದೆ. ಇದು ಎಷ್ಟು ಕಾಲ ಮುಂದುವರಿಯುತ್ತದೆ ಎಂದು ನಮಗೆ ತಿಳಿದಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಹಳ್ಳಿಯ ಕಳಪೆ ಜೀವನ ಪರಿಸ್ಥಿತಿಗಳು ಹಾವುಗಳ ಉಪಸ್ಥಿತಿಗೆ ಕಾರಣವಾಗಿರಬಹುದು ಎನ್ನಲಾಗಿದೆ. ಹೆಚ್ಚಿನ ಮನೆಗಳು ಮಣ್ಣಿನ ಗೋಡೆಗಳನ್ನು ಹೊಂದಿವೆ. ನೀರು ನಿಲ್ಲುವುದು ಮತ್ತು ನೈರ್ಮಲ್ಯದ ಕೊರತೆಯಿದೆ. ವಿಶೇಷವಾಗಿ ಮಳೆಗಾಲದಲ್ಲಿ ಅಂತಹ ಪರಿಸರಗಳು ಹೆಚ್ಚಾಗಿ ಹಾವುಗಳನ್ನು ಆಕರ್ಷಿಸುತ್ತವೆ. ಹಾಗಂತ ಗ್ರಾಮದಲ್ಲಿ ಬೇರೆ ಯಾರೂ ಹಾವನ್ನು ನೋಡಿಲ್ಲ. ಒಬ್ಬ ಗ್ರಾಮಸ್ಥರು, ಹಾವಿನ ಇರುವಿಕೆ ಬಗ್ಗೆ ಬಾಲಕಿಯ ಕುಟುಂಬದವರು ಮಾತ್ರ ಹೇಳುವುದನ್ನು ಕೇಳಿದ್ದೇವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಅದರ ಬಗ್ಗೆ ಮಾತನಾಡಲು ಸಹ ಹೆದರುತ್ತೇವೆ ಎಂದು ಹೇಳಿದರು.
ಇನ್ನು ಹಾವಿನ ಭಯದಿಂದ ಕುಟುಂಬದವರು ಬಾಲಕಿಯ ಕಿರಿಯ ಸಹೋದರರನ್ನು ಸಂಬಂಧಿಕರೊಂದಿಗೆ ಇರಲು ಕಳುಹಿಸಿದ್ದಾರೆ. ಅವರು ಒಬ್ಬ ತಂತ್ರಿಯಿಂದಲೂ ಸಹಾಯ ಕೋರಿದರು. ಆದರೆ ಪರಿಸ್ಥಿತಿ ಸುಧಾರಿಸಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಬಾಲಕಿಯ ಚಿಕ್ಕಮ್ಮ ಒಮ್ಮೆ ಹಾವನ್ನು ನೋಡಿರುವುದಾಗಿ ಹೇಳಿಕೊಂಡಿದ್ದಾರೆ. ಅದು ದಪ್ಪ, ಕಪ್ಪು ಮತ್ತು ತೋಳಿನಷ್ಟು ಉದ್ದವಾಗಿತ್ತು ಎಂದು ಅವರು ಹೇಳಿದರು. ಇದು ಮನೆಯ ಒಳಗೆ ಮತ್ತು ಹೊರಗೆ ಎರಡೂ ಕಡೆ ಕಾಣಿಸಿಕೊಂಡಿದೆ. ಅದು ಖಂಡಿತವಾಗಿಯೂ ಅವಳಿಗೆ ಒಂದಕ್ಕಿಂತ ಹೆಚ್ಚು ಬಾರಿ ಕಚ್ಚಿದೆ ಎಂದು ಹೇಳಿದ್ದಾರೆ.
ಹಾವಿನ ಪುನರಾವರ್ತಿತ ದಾಳಿಯ ಬಗ್ಗೆ ಕುಟುಂಬ ಮತ್ತು ಕೆಲವು ಗ್ರಾಮಸ್ಥರು ಮನವರಿಕೆ ಮಾಡಿಕೊಂಡಿದ್ದರೂ, ವೈದ್ಯರು ಮಾತ್ರ ಸಂಶಯ ವ್ಯಕ್ತಪಡಿಸಿದ್ದಾರೆ. ಕೌಶಂಬಿಯ ಮುಖ್ಯ ವೈದ್ಯಾಧಿಕಾರಿ ಡಾ. ಸಂಜಯ್ ಕುಮಾರ್, ಬಾಲಕಿಗೆ ಜುಲೈ 22 ರಂದು ಶಂಕಿತ ಹಾವು ಕಡಿತಕ್ಕೆ ಚಿಕಿತ್ಸೆ ನೀಡಲಾಗಿದೆ. ಆಗಸ್ಟ್ 13 ರಂದು ಮತ್ತೆ ಚಿಕಿತ್ಸೆ ನೀಡಲಾಗಿದೆ ಎಂದು ದೃಢಪಡಿಸಿದರು. ಆದರೆ, 13 ಬಾರಿ ಕಚ್ಚಿರುವ ಬಗ್ಗೆ ಯಾವುದೇ ವೈದ್ಯಕೀಯ ಪುರಾವೆಗಳಿಲ್ಲ ಎಂದು ಅವರು ಹೇಳಿದರು.










