ಕುಕ್ಕೇ ಸುಬ್ರಹ್ಮಣ್ಯ ಮಠದ ಜಿಪಿಎ ಹೋಲ್ಡರ್ ರೈಲಿನಿಂದ ಬಿದ್ದು ಮೃತ್ಯು..!

(ನ್ಯೂಸ್ ಕಡಬ) newskadaba.com ಜೂ. 19. ರೈಲಿನಲ್ಲಿ ಸಂಚರಿಸುವ ವೇಳೆ ರೈಲಿನಿಂದ ಬಿದ್ದು ಕುಕ್ಕೇ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಜಿಪಿಎ ಹೋಲ್ಡರ್ ಎಸ್.ಆರ್ ಪ್ರಸನ್ನ ಅವರು ಮೃತಪಟ್ಟಿರುವ ಕುರಿತು ವರದಿಯಾಗಿದೆ.

ಮೈಸೂರು ರೈಲು ನಿಲ್ದಾಣದಿಂದ ಸುಮಾರು 15 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿರುವುದಾಗಿ ಹೇಳಲಾಗುತ್ತಿದೆ. ಮಠದ ಕೆಲಸ ಮುಗಿಸಿ ಬುಧವಾರದಂದು ರಾತ್ರಿ ನೆಟ್ಟಣದ ರೈಲು ನಿಲ್ದಾಣದಿಂದ ಬೆಂಗಳೂರಿನ ಬಸವನಗುಡಿಯಲ್ಲಿರುವ ತನ್ನ ಮನೆಗೆ ಹೋಗುವ ಸಲುವಾಗಿ ರೈಲು ಏರಿದ್ದರು.

ಬೆಳಿಗ್ಗೆಯಾದರೂ ಮನೆಗೆ ತಲುಪದ ಹಿನ್ನೆಲೆ ಕುಟುಂಬಸ್ಥರು ಮತ್ತು ಮಠದ ಸಿಬ್ಬಂದಿಗಳು ಅವರ ಮೊಬೈಲ್ ಗೆ ಸಂಪರ್ಕಿಸಿದಾಗ ಪೋನ್ ರಿಂಗ್ ಆಗುತ್ತಿದ್ದರೂ ಸ್ವೀಕರಿಸುತ್ತಿರಲಿಲ್ಲ. ಕೆಲ ಹೊತ್ತಿನ ಬಳಿಕ ಯಾರೋ ಬೇರೆಯವರು ಪೋನ್ ಸ್ವೀಕರಿಸಿ ಘಟನೆ ಬಗ್ಗೆ ವಿವರಿಸಿದ್ದಾರೆ ಎನ್ನಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಹಾಗೂ ಮಠದ ಪ್ರಮುಖರು ಮೈಸೂರಿಗೆ ತೆರಳಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.

Scroll to Top