(ನ್ಯೂಸ್ ಕಡಬ) newskadaba.com ಕೊಯಮತ್ತೂರು, ಮಾ. 14. ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಪ್ರಿಯಕರನ ಮೈ ಮೇಲೆ ಪ್ರೇಯಸಿಯು ಕುದಿಯುವ ಎಣ್ಣೆ ಎರಚಿದ ಪರಿಣಾಮ ಯುವಕ ಗಂಭೀರ ಗಾಯಗೊಂಡ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

ಗಾಯಗೊಂಡ ಯುವಕನನ್ನು ಕಾರ್ತಿ (27) ಎಂದು ಗುರುತಿಸಲಾಗಿದೆ. ಮೀನಾ ದೇವಿ ಎಂಬಾಕೆ ಕೃತ್ಯ ಎಸಗಿದಾಕೆ. ಕಾರ್ತಿ ಹಾಗೂ ಮೀನಾ ಸಂಬಂಧಿಗಳಾಗಿದ್ದು, ಹಲವು ಸಮಯದಿಂದ ಪ್ರೀತಿಸುತ್ತಿದ್ದರು. ಅಲ್ಲದೇ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಆತ, ಕೆಲ ದಿನಗಳ ಹಿಂದೆ ಬೇರೆ ಯುವತಿಯೊಂದಿಗೆ ವಿವಾಹ ನಿಶ್ಚಯ ಮಾಡಿಕೊಂಡಿದ್ದ. ಈ ವಿಚಾರವನ್ನು ತಿಳಿಸಲೆಂದು ಮೀನಾದೇವಿಯ ಮನೆಗೆ ಬಂದಿದ್ದ ವೇಳೆ ಇವರಿಬ್ಬರ ನಡುವೆ ಗಲಾಟೆ ನಡೆದಿದ್ದು, ಕೋಪಗೊಂಡ ಮೀನಾದೇವಿ ಕುದಿಯುತ್ತಿದ್ದ ಬಿಸಿ ಎಣ್ಣೆಯನ್ನು ಆತನ ಮೈ ಮೇಲೆ ಎಸೆದಿದ್ದಾನೆ. ಈ ವೇಳೆ ಕಾರ್ತಿ ಕಿರುಚಾಡಿದ್ದು, ತಕ್ಷಣವೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿ ಮೀನಾ ದೇವಿಯನ್ನು ಪೊಲೀಸರು ಬಂಧಿಸಿದ್ದು, ಆಕೆಯ ವಿರುದ್ದ ಕೊಲೆಯತ್ನ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.











