(ನ್ಯೂಸ್ ಕಡಬ)newskadaba.com ಸಕಲೇಶಪುರ, ಫೆ.04. ತಾಲೂಕಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು ಕಾಡಾನೆಗಳ ಚಲನವಲನದ ಮೇಲೆ ನಿಗಾ ಇಡುವ ಸಿಬಂದಿಯನ್ನು ಕಿರೇಹಳ್ಳಿ ಸಮೀಪ ಓಡಿಸಿಕೊಂಡು ಹೋದ ಘಟನೆ ನಡೆದಿದೆ.

ತಾಲೂಕಿನ ಹಲಸುಲಿಗೆ ಹಾಗೂ ಉದೇವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಬೀಡು ಬಿಟ್ಟಿದ್ದು ಅರಣ್ಯ ಇಲಾಖೆಯ ಆರ್.ಆರ್.ಟಿ ಸಿಬಂದಿ ಕಾಡಾನೆಗಳ ಚಲನವಲನದ ಮೇಲೆ ತೀವ್ರ ನಿಗಾವಹಿಸಿದ್ದಾರೆ.

ಈ ನಡುವೆ ಒಂದು ಬದಿಯಿಂದ ಮತ್ತೊಂದು ಬದಿಗೆ ಕಾಡಾನೆಗಳು ದಾಟುತ್ತಿದ್ದ ವೇಳೆ ಇಟಿಎಫ್ ಸಿಬಂದಿ ಒಬ್ಬರನ್ನು ಕಾಡಾನೆಗಳು ಅಟ್ಟಿಸಿಕೊಂಡು ಘೀಳಿಡುತ್ತಾ ಹೋಗಿವೆ. ಈ ಸಂದರ್ಭದಲ್ಲಿ ಇಟಿಎಫ್ ಸಿಬಂದಿ ಮೈಕ್ ಮೂಲಕ ಓಡು ಓಡು ಎಂದು ಅನೌನ್ಸ್ ಮಾಡಿದ ವೇಳೆ ಎದ್ದುಬಿದ್ದು ಓಡಿದ ಕಾರು ಚಾಲಕ ಕೂದಲೆಲೆಯ ಅಂತರದಲ್ಲಿ ಪಾರಾಗಿ ತನ್ನ ಜೀವವನ್ನು ಉಳಿಸಿಕೊಂಡಿದ್ದಾರೆ. ಜೀವದ ಹಂಗು ತೊರೆದು ಇಟಿಎಫ್ ಸಿಬಂದಿ ಕಾಡಾನೆಗಳ ಚಲನವಲನ ಗಮನಿಸಿ ಸ್ಥಳೀಯರಿಗೆ ಮಾಹಿತಿ ನೀಡುತ್ತಿದ್ದಾರೆ.










