ಫರಂಗಿಪೇಟೆ: ಮಸೀದಿಗೆ ನುಗ್ಗಿ ಧರ್ಮಗುರುವಿಗೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ➤ ಸಿಸಿಟಿವಿಯಲ್ಲಿ ದೃಶ್ಯ ಸೆರೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ. 30. ಮಸೀದಿಗೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಮಸೀದಿಯ ಧರ್ಮಗುರುವಿಗೆ ಹಲ್ಲೆ ನಡೆಸಿರುವ ಘಟನೆ ಫರಂಗಿಪೇಟೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ‌.

ಹಲ್ಲೆಗೊಳಗಾದವರನ್ನು ಫರಂಗಿಪೇಟೆ- ಅಮ್ಮೆಮಾರ್ ರಸ್ತೆಯಲ್ಲಿರುವ ಬಿರ್ರುಲ್ ವಾಲಿದೈನ್ ಮಸೀದಿಯ ಧರ್ಮ ಗುರು, ಕುಂದಾಪುರ ನಿವಾಸಿ ಮುಸ್ತಾಕ್ ಎಂದು ಗುರುತಿಸಲಾಗಿದೆ. ಇವರು ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳುವ ಸಂದರ್ಭ ಕಾಲಿಗೆ ಗಾಯಗಳಾಗಿದ್ದು, ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾತ್ರಿ 12 ಗಂಟೆಯ ಸುಮಾರಿಗೆ ಮಸೀದಿಗೆ ನುಗ್ಗಿದ ಮೂರು ಮಂದಿಯ ತಂಡವೊಂದು ಮಸೀದಿಯ 2ನೇ ಮಹಡಿಯಲ್ಲಿ ಮಲಗಿದ್ದ ಧರ್ಮ ಗುರು ಮುಸ್ತಾಕ್ ಅವರ ಕತ್ತು ಹಿಚುಕಿ ಹಲ್ಲೆ ನಡೆಸಿದೆ. ಈ ವೇಳೆ ಮುಸ್ತಾಕ್ ಅವರು ದುಷ್ಕರ್ಮಿಗಳ ಕೈಯಿಂದ ತಪ್ಪಿಸಿಕೊಂಡು ಕೆಳ ಅಂತಸ್ತಿಗೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮಸೀದಿಯ ಸಿಸಿ ಕೆಮರಾದಲ್ಲಿ ದುಷ್ಕರ್ಮಿಗಳು ನುಗ್ಗಿರುವ ದೃಶ್ಯ ಸೆರೆಯಾಗಿದ್ದು, ಆದರೆ ದುಷ್ಕರ್ಮಿಗಳು ಹೆಲ್ಮೆಟ್ ಧರಿಸಿದ್ದರು ಎಂದು ದೂರು ನೀಡಲಾಗಿದೆ. ಘಟನೆಯ ಕುರಿತು ಮಸೀದಿ ಅಧ್ಯಕ್ಷ ಸೈಯದ್ ಬಾವಾ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ‌.

error: Content is protected !!

Join the Group

Join WhatsApp Group