ಕಾಫಿನಾಡಿಗೂ ಕಾಲಿಟ್ಟ ಮಿಡತೆಗಳು ➤ ಮಲೆನಾಡಿನ ಅಡಿಕೆ ಬೆಳೆಗಾರರು ಹೈರಾಣು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು,ಜೂ.10:  ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದ್ದ ಮಿಡತೆಗಳು ಈಗ ಕಾಫಿನಾಡಿಗೂ ಕಾಲಿಟ್ಟಿದ್ದು, ಮಲೆನಾಡಿಗರು ಕಂಗಾಲಾಗಿದ್ದಾರೆ.. ಈಗಾಗಲೇ ಕಳೆದ ಎರಡು ದಶಕಗಳಿಂದ ಅಡಕೆಗೆ ಹಳದಿ ಎಲೆ ರೋಗ ತಗುಲಿದೆ. ಕಳೆದ ಎರಡು ವರ್ಷಗಳ ನಿರಂತರ ಭಾರೀ ಮಳೆಯಿಂದ ಅಡಕೆ ತೋಟಕ್ಕೆ ಕೊಳೆ ರೋಗ ಕೂಡ ಆವರಿಸಿತ್ತು. ತೋಟದಲ್ಲಿ ಎರಡು ಮೂರು ಅಡಿ ನೀರು ನಿಂತಿತ್ತು.

 

ಇದರಿಂದ ಮಲೆನಾಡಿಗರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದರು. ಹೀಗೆ ಹಲವು ಸಮಸ್ಯೆಗಳ ನಡುವೆ ಕೆಲವರು ಅಡಕೆಯನ್ನು ಕಷ್ಟಪಟ್ಟು ಉಳಿಸಿಕೊಂಡಿದ್ದರು. ಇದೀಗ ಮಲೆನಾಡಿಗರಿಗೆ ಮಿಡತೆಗಳ ಕಾಟ ಕೂಡ ಆರಂಭವಾಗಿದ್ದು, ಮಲೆನಾಡಿಗರನ್ನು ಕಂಗೆಡಿಸಿದೆ. ಅಡಕೆ ಗರಿಗಳನ್ನು ತಿಂದು ಹಾಕುತ್ತಿರುವ ಮಿಡತೆಗಳನ್ನು ಕಂಡು ತೋಟದ ಮಾಲೀಕರು ಭಯಭೀತರಾಗಿದ್ದಾರೆ. ತೋಟ ಉಳಿಯುತ್ತೋ ಇಲ್ಲವೋ ಎಂಬ ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ. ಈಗಾಗಲೇ ಶೃಂಗೇರಿ ತಾಲೂಕಿನ ಎರಡ್ಮೂರು ತೋಟಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಿಡತೆಗಳು ಕಾಣಿಸಿಕೊಂಡಿವೆ. ಗುಂಪು ಗುಂಪಾಗಿ ದಾಳಿ ಮಾಡಿರುವ ಮಿಡತೆಗಳು ಅಡಕೆ ಗರಿಯನ್ನು ಸಂಪೂರ್ಣ ನಾಶ ಮಾಡಿವೆ.

 

error: Content is protected !!

Join the Group

Join WhatsApp Group