ಮೇಘಾಲಯದಲ್ಲಿ ಸಿಎಎ ಪರ-ವಿರೋಧಿಗಳ ನಡುವೆ ಸಂಘರ್ಷ ಇಬ್ಬರು ಮೃತ್ಯು

  • 10 ಮಂದಿಗೆ ಚಾಕು ಇರಿತ

  • ಶಿಲ್ಲಾಂಗ್‌ನಲ್ಲಿ ಕರ್ಫ್ಯೂ ಘೋಷಣೆ

ಶಿಲ್ಲಾಂಗ್, ಮಾ.1: ಮೇಘಾಲಯದ ಶಿಲ್ಲಾಂಗ್‌ನಲ್ಲಿ ನಡೆಯುತ್ತಿದ್ದ ಸಿಎಎ ಪರ-ವಿರೋಧಿ ಪ್ರತಿಭಟನೆ ಶನಿವಾರ ಹಿಂಸಾಚಾರಕ್ಕೆ ತಿರುಗಿದ್ದು, ಇಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ. ಸಂಘರ್ಷದಲ್ಲಿ 10 ಮಂದಿಗೆ ಚಾಕು ಇರಿಯಲಾಗಿದೆ ಎಂದು ತಿಳಿದು ಬಂದಿದೆ.

ನಗರದಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಶಿಲ್ಲಾಂಗ್‌ನ ಜಯಾವ್, ಲಾಂಗ್‌ಸ್ನಿಂಗ್ ಮತ್ತು ಚಿರಾಪುಂಚಿ ಪಟ್ಟಣದ ಐವ್ ಸೊಹ್ರಾ ಮಾರುಕಟ್ಟೆಗಳಲ್ಲಿ ಘರ್ಷಣೆ ನಡೆದಿದ್ದು, ಈ ವೇಳೆ ಇಬ್ಬರು ಗಾಯಗೊಂಡಿದ್ದಾರೆ. ಇನ್ನು ಬಾಂಗ್ಲಾದೇಶ ಗಡಿಯ ಸಮೀಪದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಇಚಮತಿ ಪ್ರದೇಶದಲ್ಲಿ ಖಾಸಿ ವಿದ್ಯಾರ್ಥಿ ಸಂಘಟನೆ ಸದಸ್ಯರು ಮತ್ತು ಸ್ಥಳೀಯರಲ್ಲದವರ ನಡುವೆ ಘರ್ಷಣೆ ಸಂಭವಿಸಿದ ಪರಿಣಾಮ ಸ್ಥಳೀಯ ಟ್ಯಾಕ್ಸಿ ಚಾಲಕನೊಬ್ಬ ಹತ್ಯೆಯಾಗಿದ್ದಾನೆ. ಅಲ್ಲದೆ ಹಿಂಸಾಚಾರದಲ್ಲಿ 10 ಮಂದಿಗೆ ಚಾಕುವಿನಿಂದ ಇರಿಯಲಾಗಿದೆ. ಒಟ್ಟಾರೆ ಹಿಂಸಾಚಾರದಲ್ಲಿ ಈ ವರೆಗೂ ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಗಲಭೆ ಪೀಡಿತ ಶಿಲ್ಲಾಂಗ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕರ್ಫ್ಯೂ ಘೋಷಿಸಲಾಗಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಈಗಾಗಲೇ ಮೇಘಾಲಯಕ್ಕೆ ಆಗಮಿಸಿದ್ದು, ಇನ್ನೂ ಆರು ತುಕಡಿಗಳು ಬರಲಿವೆ ಎಂದು ಹೇಳಲಾಗಿದೆ. ಘಟನೆಯ ನಂತರ ಎಂಟು ಜನರನ್ನು ಬಂಧಿಸಲಾಗಿದ್ದು, ವಿಚಾರಣೆ ಆರಂಭಿಸಲಾಗಿದೆ.

ಮೇಘಾಲಯ ಮುಖ್ಯಮಂತ್ರಿ ಸಂಗ್ಮಾ ಅವರು,‘ಜನರು ಹಿಂಸಾಚಾರದಿಂದ ದೂರವಿರಬೇಕು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸರಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ‘ ಎಂದು ಹೇಳಿದ್ದಾರೆ.

error: Content is protected !!

Join the Group

Join WhatsApp Group