ಬೆಳ್ತಂಗಡಿ: ಐಟಿಐ ಉಪನ್ಯಾಸಕನ ಬರ್ಬರ ಹತ್ಯೆ ➤ ರಸ್ತೆ ಮಧ್ಯದಲ್ಲೇ ಮಚ್ಚಿನಿಂದ ಕೊಚ್ಚಿ ಕೊಂದ ದುಷ್ಕರ್ಮಿಗಳು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮೇ.28. ಸರಕಾರಿ ಐಟಿಐ ಕಾಲೇಜಿನ ಉಪನ್ಯಾಸಕರೋರ್ವರನ್ನು ರಸ್ತೆ ಮಧ್ಯದಲ್ಲೇ ಮಚ್ಚಿನಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಮುಂಡೂರು ಎಂಬಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಬೆಳ್ತಂಗಡಿ ತಾಲೂಕಿನ ಮುಂಡೂರು ನಿವಾಸಿ, ಮಾಲಾಡಿ ಐಟಿಐನ ಉಪನ್ಯಾಸಕ ವಿಕ್ರಮ್ ಜೈನ್(40.ವ) ಎಂದು ಗುರುತಿಸಲಾಗಿದೆ. ವಿಕ್ರಮ್ ರನ್ನು ಸೋಮವಾರ ತಡರಾತ್ರಿ ಮುಂಡೂರಿನ ಕೋಟಿಕಟ್ಟೆ ಎಂಬಲ್ಲಿ ರಸ್ತೆ ಮಧ್ಯದಲ್ಲೇ ತಲವಾರಿನಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದು ಅಪರಿಚಿತರು ಪರಾರಿಯಾಗಿದ್ದಾರೆ. ಮೃತದೇಹದ ಪಕ್ಕದಲ್ಲೇ ವಿಕ್ರಮ್ ರವರ ಆಲ್ಟೋ ಕಾರು ದೊರೆತಿದ್ದು, ಯಾವ ಕಾರಣಕ್ಕಾಗಿ ಕೊಲೆಗೈಯಲಾಗಿದೆ ಎಂದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ.

ತಡರಾತ್ರಿ ಅಪರಿಚಿತ ದ್ವಿಚಕ್ರ ವಾಹನವೊಂದು ಇಲ್ಲಿ ನಿಂತಿದ್ದನ್ನು ಸ್ಥಳೀಯರು ನೋಡಿದ್ದಾರೆ ಎನ್ನಲಾಗಿದ್ದು, ಬಳಿಕ ಯಾವುದೋ ಕಾರಣಕ್ಕೆ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿಕೊಳ್ಳಲಾಗಿದೆ.

error: Content is protected !!

Join the Group

Join WhatsApp Group