(ನ್ಯೂಸ್ ಕಡಬ) newskadaba.com, ಜು.01: ಬೆಂಗಳೂರಿನಿಂದ 100 ಕಿ.ಮೀ. ಸುತ್ತಮುತ್ತಲಿನ ನಗರಗಳಿಗೆ ಹಾಗೂ ಕರಾವಳಿಯ ಮಂಗಳೂರಿಗೆ ಚತುಷ್ಪಥ ರೈಲ್ವೆ ಮಾರ್ಗವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಪ್ರಕಟಿಸಿದ್ದಾರೆ.
ಚನ್ನಪಟ್ಟಣದ ಎಲೆಕೇರಿ ಬಳಿ ನೂತನ ರಸ್ತೆ ಮೇಲ್ಸೇತುವೆ ಉದ್ಘಾಟನಾ ಸಮಾರಂಭದಲ್ಲಿ ಅವರು ಈ ವಿಷಯ ತಿಳಿಸಿದರು. ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ಮಂಡಿಸಿದ ಕರ್ನಾಟಕದ ರೈಲ್ವೆ ಬೇಡಿಕೆಗಳಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಚತುಷ್ಪಥ ಮಾರ್ಗದ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಮುಂದಿನ ಒಂದೂವರೆ ಇಂದ ಎರಡು ವರ್ಷಗಳಲ್ಲಿ ಕಾಮಗಾರಿ ಮುಗಿಸುವ ಗುರಿ ಹೊಂದಲಾಗಿದೆ.ಚತುಷ್ಪಥ ರೈಲು ಮಾರ್ಗ ನಿರ್ಮಾಣಕ್ಕಾಗಿ ಶೀಘ್ರದಲ್ಲೇ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.ಗೌರಿಬಿದನೂರು ಮಾರ್ಗವಾಗಿ ಹಿಂದೂಪುರ ಹಾಗೂ ಕೋಲಾರ ನಗರಗಳಿಗೂ ಚತುಷ್ಪಥ ಹಳಿ ನಿರ್ಮಿಸಲು ಬೇಡಿಕೆ ಇಡಲಾಗಿದೆ.
ಸಕಲೇಶಪುರ ಮತ್ತು ಗುಂಡ್ಯ ನಡುವೆ ಸಮಾನಾಂತರ ರಸ್ತೆ ಹಾಗೂ ರೈಲು ಮಾರ್ಗ ನಿರ್ಮಿಸುವ ಎಂ.ಬಿ. ಪಾಟೀಲ್ ಅವರ ಸಲಹೆಯನ್ನು ಒಪ್ಪಿದ ಸಚಿವರು, ಬಂದರು ನಗರಿಗೆ ತ್ವರಿತ ರೈಲು ಸಂಪರ್ಕ ಕಲ್ಪಿಸುವುದು ಇಲಾಖೆಯ ಆದ್ಯತೆಯಾಗಿದೆ ಎಂದು ತಿಳಿಸಿದರು.









