(ನ್ಯೂಸ್ ಕಡಬ) newskadaba.com, ಜೂ.25 ದಾವಣಗೆರೆ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರ ಸುಹೇಲ್ (20) ಎಂಬಾತನನ್ನು ಹರಿಹರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿಯು ರಾಮ ಮಂದಿರವನ್ನು ಸ್ಫೋಟಿಸುವ ತನ್ನ ಉದ್ದೇಶವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತನಿಖೆಯ ವೇಳೆ ಈತನ ಮೊಬೈಲ್ನಲ್ಲಿ ಪಾಕಿಸ್ತಾನದ ಕಂಟ್ರಿ ಕೋಡ್ ಹೊಂದಿರುವ ವಾಟ್ಸಾಪ್ ಗ್ರೂಪ್ಗಳು, ಮಾರಕಾಸ್ತ್ರಗಳನ್ನು ಹಿಡಿದಿರುವ ಚಿತ್ರಗಳು ಹಾಗೂ ‘ರಾಣಾ ಬಾಯ್’ ಎಂಬ ಹೆಸರಿನ ಪಾಕಿಸ್ತಾನಿ ಸಂಪರ್ಕ ಸಂಖ್ಯೆ ಪತ್ತೆಯಾಗಿದೆ.
ಭಾರತದಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಗಳನ್ನು ನಡೆಸಿ ಸಾವು-ನೋವು ಸೃಷ್ಟಿಸಲು ಈತನ ತಂಡ ಸಂಚು ರೂಪಿಸಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ತುಮಕೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.







