(ನ್ಯೂಸ್ ಕಡಬ) newskadaba.com, ಮಾ.17 ಮಂಗಳೂರು/ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಮುಂದುವರಿದಿರುವ ನಡುವೆಯೂ ದೇಶದ ಅಡುಗೆ ಅನಿಲ ಪೂರೈಕೆಯ ಕುರಿತು ಉಂಟಾಗಿದ್ದ ಆತಂಕ ಕಡಿಮೆಯಾಗಿದೆ. ಎಲ್ಪಿಜಿ ಸಾಗಿಸುತ್ತಿದ್ದ ‘ಶಿವಾಲಿಕ್’ ಹಡಗು ಹೊರ್ಮುಜ್ ಜಲಸಂಧಿಯನ್ನು ಯಾವುದೇ ಅಡಚಣೆಯಿಲ್ಲದೆ ದಾಟಿ ಗುಜರಾತ್ನ ಮುಂದ್ರಾ ಬಂದರನ್ನು ಸುರಕ್ಷಿತವಾಗಿ ತಲುಪಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿಎಲ್)ಗಾಗಿ ತರಲಾಗುತ್ತಿರುವ ಒಟ್ಟು 46 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿಯಲ್ಲಿ, ಮೊದಲ ಹಂತವಾಗಿ ಮುಂದ್ರಾ ಬಂದರಿನಲ್ಲಿ 20 ಸಾವಿರ ಟನ್ ಅನಿಲವನ್ನು ಇಳಿಸಲಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಹಡಗು ಮಂಗಳೂರಿನತ್ತ ಪ್ರಯಾಣ ಮುಂದುವರಿಸಲಿದೆ.
ಉಳಿದ 26 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿಯೊಂದಿಗೆ ‘ಶಿವಾಲಿಕ್’ ಹಡಗು ಮೂರ್ನಾಲ್ಕು ದಿನಗಳಲ್ಲಿ ನವಮಂಗಳೂರು ಬಂದರನ್ನು ತಲುಪುವ ನಿರೀಕ್ಷೆಯಿದೆ. ತುರ್ತು ಕ್ರಮಗಳಡಿ ಅನಿಲ ವಿತರಣೆಗೆ ಅಗತ್ಯ ಸಕಲ ಸಿದ್ಧತೆಗಳನ್ನು ಸಚಿವಾಲಯ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬೆಳವಣಿಗೆ ದೇಶದ ಇಂಧನ ಭದ್ರತೆಗೆ ಮಹತ್ವದ ನೆಮ್ಮದಿಯನ್ನು ಒದಗಿಸಿದೆ.









