(ನ್ಯೂಸ್ ಕಡಬ) newskadaba.com, ಆಗಸ್ಟ್ 29 ಕೊಚ್ಚಿ: ಯುವ ಐಟಿ ಉದ್ಯೋಗಿ ಅಪಹರಣ ಮತ್ತು ಹಲ್ಲೆ ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಹಲವಾರು ಟಿವಿ ಶೋಗಳಿಗೆ ಹೆಸರುವಾಸಿಯಾಗಿರುವ ತಮಿಳು ನಟಿ ಲಕ್ಷ್ಮಿ ಮೆನನ್ (ಅವರ ಹೆಸರು ಕೇಳಿ ಬಂದಿದೆ. ಕೊಚ್ಚಿಯ ಬಾರ್ವೊಂದರಲ್ಲಿ ನಡೆದ ವಾಗ್ವಾದದ ಅನಂತರ ಯುವ ಐಟಿ ಉದ್ಯೋಗಿಯನ್ನು ಅಪಹರಿಸಿ ಥಳಿಸಲಾಗಿತ್ತು. ಈ ಘಟನೆಯಲ್ಲಿ ನಟಿ ಲಕ್ಷ್ಮಿ ಮೆನನ್ ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ. ಮಲಯಾಳಂ ಸಿನಿಮಾದಲ್ಲಿಯೂ ಹೆಸರುವಾಸಿಯಾಗಿರುವ ನಟಿ, ಅಪಹರಣಕಾರರ ಕಾರಿನಲ್ಲಿದ್ದರು ಎಂದು ಆರೋಪಿಸಲಾಗಿದೆ. ಲಕ್ಷ್ಮಿ ಮತ್ತು ಇತರ ಕೆಲವರು ಕಾರನ್ನು ತಡೆದು ಜಗಳವಾಡುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral video) ಆಗಿದೆ.
ಕಳೆದ ಭಾನುವಾರ ರಾತ್ರಿ ನಡೆದಿರುವ ಈ ಘಟನೆಗೆ ಸಂಬಂಧಿಸಿ ಉತ್ತರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಅವರಲ್ಲಿ ಒಬ್ಬ ನಟಿಯ ಸ್ನೇಹಿತ ಎಂದು ಗುರುತಿಸಲಾಗಿದೆ. ಬ್ಯಾನರ್ಜಿ ರಸ್ತೆಯ ಬಾರ್ನಲ್ಲಿ ಆರೋಪಿಗಳು ಮತ್ತು ಐಟಿ ಯುವಕನ ಮಧ್ಯೆ ವಾಗ್ವಾದ ನಡೆದಿತ್ತು. ಅನಂತರ ಆರೋಪಿಯು ತನ್ನ ಕಾರಿನಲ್ಲಿ ಹಿಂತಿರುಗುತ್ತಿದ್ದ ಯುವ ಐಟಿ ಉದ್ಯೋಗಿಯನ್ನು ಉತ್ತರ ಸೇತುವೆ ಬಳಿ ತಡೆದು ನಿಲ್ಲಿಸಿದ್ದಾರೆ. ಬಳಿಕ ಆತನನ್ನು ತಮ್ಮ ಕಾರಿನೊಳಗೆ ಎಳೆದೊಯ್ದು ಬೇರೊಂದು ಪ್ರದೇಶಕ್ಕೆ ಕರೆದುಕೊಂಡು ಹೋಗಿ ಥಳಿಸಲಾಗಿದೆ.
ಕೆಲವು ವರ್ಷಗಳ ಹಿಂದೆ ‘ಬಿಗ್ ಬಾಸ್ ತಮಿಳು ಸೀಸನ್ 4ರಲ್ಲಿ ಲಕ್ಷ್ಮಿ ಮೆನನ್ ಭಾಗವಹಿಸುವ ಊಹಾಪೋಹಗಳು ಇದ್ದವು. ಆದರೆ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಇದನ್ನು ನಿರಾಕರಿಸಿದರು ಮತ್ತು ನಾನು ಬಿಗ್ ಬಾಸ್ ಶೋನಲ್ಲಿ ಭಾಗವಹಿಸುತ್ತಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದರು. ನಾನು ಈಗ ಇತರರ ಪ್ಲೇಟ್ ತೊಳೆಯುವುದು ಮತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುವುದಿಲ್ಲ. ಎಂದಿಗೂ ಮತ್ತು ಕಾರ್ಯಕ್ರಮದ ಹೆಸರಿನಲ್ಲಿ ಕೆಮರಾ ಮುಂದೆ ಜಗಳವಾಡುವುದಿಲ್ಲ. ಇನ್ನು ಮುಂದೆ ನಾನು ಯಾವುದೋ ಶೋಗೆ ಹೋಗುತ್ತೇನೆ ಎಂಬ ಊಹಾಪೋಹಗಳು ಬರುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದರು.









