ಬಿಜೆಪಿ ಮುಖಂಡನ ಪುತ್ರನಿಂದ ಯುವತಿಗೆ ವಂಚನೆ- ಆರೋಪಿಯ ಬಂಧಿಸದಿದ್ದಲ್ಲಿ ರಾಮಸೇನೆಯ ವತಿಯಿಂದ ಪ್ರತಿಭಟನೆಯ ಎಚ್ಚರಿಕೆ



(ನ್ಯೂಸ್ ಕಡಬ) newskadaba.com ಕಡಬ, ಜು.03. ಪುತ್ತೂರಿನಲ್ಲಿ ರಾಜಕೀಯ ವ್ಯಕ್ತಿಯ ಪುತ್ರನೋರ್ವ ತನ್ನ ಸಹಪಾಠಿಯನ್ನು ಅತ್ಯಾಚಾರಗೈದು ಮದುವೆಯಾಗಲು ನಿರಾಕರಿಸಿರುವುದನ್ನು ಖಂಡಿಸಿರುವ ರಾಮಸೇನಾ ಪುತ್ತೂರು ಸಂಘಟನೆಯು ಆರೋಪಿಯನ್ನು ಬಂಧಿಸದಿದ್ದಲ್ಲಿ ಸಮಾನ ಮನಸ್ಕರೊಂದಿಗೆ ಸೇರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.







ಈ ಬಗ್ಗೆ ಗುರುವಾರದಂದು ಕಡಬದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಮಸೇನಾ ಪುತ್ತೂರು ಜಿಲ್ಲಾಧ್ಯಕ್ಷ ಗೋಪಾಲ ನಾಯ್ಕ್ ಮೇಲಿನಮನೆ ಮಾತನಾಡಿ, ಪುತ್ತೂರು ನಗರಸಭಾ ಸದಸ್ಯ, ವಾಸ್ತುತಜ್ಞ ಪಿ.ಜಿ. ಜಗನ್ನಿವಾಸ ರಾವ್ ಅವರ ಮಗ ತನ್ನ ಸ್ನೇಹಿತೆಯನ್ನು ಅತ್ಯಾಚಾರಗೈದು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ಘಟನೆ ನಿಜಕ್ಕೂ ನಾಚಿಗೇಡಿನ ಸಂಗತಿಯಾಗಿದ್ದು, ಮಾತನಾಡಬೇಕಾದ ಸಂಘಟನೆಯವರು ಮೌನವಹಿಸಿರುವುದು ವಿಪರ್ಯಾಸವಾಗಿದೆ.






ರಾಮಸೇನೆಯು ಘಟನೆಯನ್ನು ಉಗ್ರವಾಗಿ ಖಂಡಿಸುವುದಲ್ಲದೆ, ಆರೋಪಿಯನ್ನು ಕೂಡಲೇ ಬಂಧಿಸಿ ಕಾನೂನು ರೀತಿಯಲ್ಲಿ ತಕ್ಕ ಶಿಕ್ಷೆ ನೀಡಬೇಕು. ಪ್ರತಿಷ್ಠಿತ ವ್ಯಕ್ತಿ ಎನಿಸಿಕೊಂಡವನಿಂದ ಅನ್ಯಾಯವಾಗಿದ್ದರೂ ಈ ಬಗ್ಗೆ ಹಿಂದೂ ಸಮಾಜದ ಸಂಘಟನೆಗಳು, ಮುಖಂಡರು ಯಾಕೆ ವಿರೋಧಿಸುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಸಣ್ಣ ಸಣ್ಣ ವಿಷಯಕ್ಕೂ ಉಗ್ರ ಹೋರಾಟ ಮಾಡುವ ಹಿಂದೂ ಸಂಘಟನೆಗಳ ಮುಖಂಡರು ಈಗ ಎಲ್ಲಿ ಹೋಗಿದ್ದಾರೆ. ಒಂದು ವೇಳೆ ಆ ಹೆಣ್ಣು ಮಗಳಿಗೆ ಇತರ ಧರ್ಮದವರಿಂದ ಅನ್ಯಾಯ ಆಗುತ್ತಿದ್ದರೆ ಸುಮ್ಮನೆ ಇರುತ್ತಿದ್ದರೇ. ಹಿಂದೂ ಸಮಾಜದ ಹೆಣ್ಣು ಮಗಳಿಗೆ ಅನ್ಯಾಯ ಆದಾಗ ಅನ್ಯಾಯ ಮಾಡಿದವನ್ನು ಯಾವನೇ ಆಗಿರಲಿ ಆತನಿಂದ ನ್ಯಾಯ ಒದಗಿಸಿ ಕೊಡಬೇಕಾಗಿರುವುದು ಇವರ ಧರ್ಮವಲ್ಲವೇ. ಇಂದು ಆ ಹೆಣ್ಣು ಮಗಳ ತಾಯಿ ಬೀದಿಗೆ ಬಂದು ನ್ಯಾಯ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ದೂರದ ದೆಹಲಿಯಲ್ಲಿ ಅತ್ಯಾಚಾರ ಆದಾಗ ಇಲ್ಲಿ ಆಕಾಶವೇ ಕಳಚಿ ಬಿದ್ದ ಹಾಗೆ ಮಾಡುವ ಪ್ರತಿಭಟಿಸುವ ನಾಯಕರು ಈಗ ಎಲ್ಲಿಗೆ ಹೋಗಿದ್ದಾರೆ, ಇದು ಹಿಂದೂ ಧರ್ಮಕ್ಕೆ ಮಾಡಿರುವ ದ್ರೋಹವಾಗಿದ್ದು, ಪೋಲಿಸ್ ಇಲಾಖೆ ಕೂಡಲೇ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಆ ಹೆಣ್ಣು ಮಗಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ರಾಮಸೇನೆ ವತಿಯಿಂದ ಆಗ್ರಹಿಸುತ್ತಿದ್ದೇವೆ. ಇಲ್ಲದಿದ್ದರೆ ಸಮಾನ ಮನಸ್ಕರೊಂದಿಗೆ ಸೇರಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶಶಿಧರ್ ದೇವಸ್ಯ ಉಪಸ್ಥಿತರಿದ್ದರು

error: Content is protected !!
Scroll to Top