ರಾಜಸ್ಥಾನ: ಕಳ್ಳತನ ಆರೋಪದಲ್ಲಿ ದಲಿತ ಯುವಕರಿಗೆ ಚಿತ್ರಹಿಂಸೆ, ಸ್ಕ್ರೂಡ್ರೈವರ್‌ನಿಂದ ಖಾಸಗಿ ಭಾಗಕ್ಕೆ ತಿವಿದ ದುಷ್ಕರ್ಮಿಗಳು

  • ಅಮಾನವೀಯ ಘಟನೆಯ ವೀಡಿಯೊ ವೈರಲ್

ಜೈಪುರ್, ಫೆ.20: ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರು ದಲಿತ ಯುವಕರಿಗೆ ಚಿತ್ರಹಿಂಸೆ ನೀಡಿದ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ನಡೆದಿದ್ದು, ವೈರಲ್ ಆದ ವೀಡಿಯೊದಲ್ಲಿ ದುಷ್ಕರ್ಮಿಯೊಬ್ಬ ಸಂತ್ರಸ್ತನನ್ನು ಪೆಟ್ರೋಲ್‌ನಲ್ಲಿ ಅದ್ದಿದ ಸ್ಕ್ರೂಡ್ರೈವರ್‌ನಿಂದ ಆತನ ಖಾಸಗಿ ಭಾಗಕ್ಕೆ ತಿವಿದಿದ್ದಾನೆ.

ದ್ವಿಚಕ್ರ ವಾಹನ ಶೋರೂಂನಲ್ಲಿ ಹಣ ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದಾರೆ ಎಂದು ಆರೋಪಿಸಿ ಶೋರೂಂ ಸಿಬ್ಬಂದಿ, ಇಬ್ಬರು ದಲಿತ ಯುವಕರ ಬಟ್ಟೆ ಬಿಚ್ಚಿ, ಅವರನ್ನು ಅಮಾನವೀಯವಾಗಿ ಥಳಿಸಿದ್ದಾರೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ. ಇಬ್ಬರು ವ್ಯಕ್ತಿಗಳು ರವಿವಾರ ಶೋರೂಂನಿಂದ ಹಣ ಕದಿಯುತ್ತಿದ್ದಾಗ ಸಿಕ್ಕಿಹಾಕಿಕೊಂಡಿದ್ದರು. ಅವರ ಮೇಲೆ ಶೋರೂಂ ಸಿಬ್ಬಂದಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. ಆ ವೇಳೆ ಚಿತ್ರೀಕರಿಸಿದ ವೀಡಿಯೊ ವೈರಲ್ ಆಗಿದೆ. ವೀಡಿಯೊ ಮೂಲಕ ಘಟನೆ ಬೆಳಕಿಗೆ ಬಂದಿದ್ದು, ಸಂತ್ರಸ್ತರು ಬುಧವಾರ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಪಂಚೋಡಿ ಪೊಲೀಸ್ ಠಾಣೆಯ ವರಿಷ್ಠಾಧಿಕಾರಿ ರಾಜ್‌ಪಾಲ್ ಸಿಂಗ್ ತಿಳಿಸಿದ್ದಾರೆ.

ಹಣ ಕದ್ದ ಆರೋಪದಲ್ಲಿ ಇಬ್ಬರು ದಲಿತರ ವಿರುದ್ಧ ಶೋರೂಮ್ ಸಿಬ್ಬಂದಿ ದೂರು ನೀಡಿದ್ದಾರೆ. ದಲಿತರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಏಳು ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

https://twitter.com/srikanthbjp_/status/1230353583318720512?s=20

error: Content is protected !!

Join the Group

Join WhatsApp Group