ಆಸ್ತಿ ಮಗನಿಗೆ ಬರೆದುಕೊಟ್ಟು ಬೀದಿಗೆ ಬಂದ ದೇಶದ ಶ್ರೀಮಂತ ವ್ಯಕ್ತಿ ► ಮನೆ ಬಾಡಿಗೆ ಕಟ್ಟಲು ಹೆಣಗಾಡುತ್ತಿರುವ ರೇಮಂಡ್ ಕಂಪನಿ ಮಾಲೀಕ

(ನ್ಯೂಸ್ ಕಡಬ) newskadaba.com ಮುಂಬೈ, ಆ.11. ಸಾವಿರಾರು ಕೋಟಿ ರುಪಾಯಿಗಳ ಒಡೆಯ, ದೇಶದ ಸಿರಿವಂತರಲ್ಲಿ ಒಬ್ಬರಾಗಿದ್ದ ರೇಮಂಡ್ ವಸ್ತ್ರ ಕಂಪನಿಯ ಮಾಲೀಕ ದೇಶದ ಅತಿ ಶ್ರೀಮಂತ ವ್ಯಕ್ತಿಗಳ ಪೈಕಿ ಒಬ್ಬರಾದ ವಿಜಯಪತ್ ಸಿಂಗಾನಿಯಾ ಅವರು ಇದೀಗ ‘ದಿವಾಳಿ’ಯಾಗಿ ಬೀದಿಗೆ ಬಂದಿದ್ದು, ಹಣಕಾಸು ನೆರವಿಗಾಗಿ ಮಗನ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ್ದಾರೆ.

ರೇಮಂಡ್ಸ್ ಲಿಮಿಟೆಡ್ ಎಂಬ ವಸ್ತ್ರೋದ್ಯಮ ಸ್ಥಾಪಿಸಿ ಪುರುಷರ ಮನೆ ಮಾತಾಗಿದ್ದ ರೇಮಂಡ್ ಕಂಪೆನಿಯ ಮಾಲೀಕ ಇಂದು ಮಗನ ನಿರ್ಲಕ್ಷದಿಂದ ಬಾಡಿಗೆ ಮನೆಯಲ್ಲಿ ವಾಸ ಮಾಡುವಂತಾಗಿದೆ ಎಂದು ಮುಂಬೈ ಮಿರರ್ ವರದಿ ಮಾಡಿದೆ. ಇದಕ್ಕೆ ಕಾರಣ ಅವರ ಕಂಪನಿ ನಷ್ಟದಲ್ಲಿದೆ ಎಂದಲ್ಲ. ತನ್ನಲ್ಲಿ ಇದ್ದ ಆಸ್ತಿಯನ್ನೆಲ್ಲಾ ಪುತ್ರ ಗೌತಮ್ ಸಿಂಘಾನಿಯಾಗೆ ಬರೆದುಕೊಟ್ಟ ಮೇಲೆ, ಇದೀಗ ಪುತ್ರನೇ ಅವರನ್ನು ಮನೆಯಿಂದ ಹೊರಹಾಕಿದ್ದಾರೆ. ವಿಜಯಪತ್ ತಮ್ಮ ಎಲ್ಲಾ ಆಸ್ತಿ ಹಾಗೂ ಕಂಪೆನಿಯ ಷೇರುಗಳನ್ನು ಮಗ ಗೌತಮ್ ಸಿಂಗಾನಿಯಾ ಅವರಿಗೆ ಬರೆದುಕೊಟ್ಟಿದ್ದಾರೆ. ಮುಂಬೈನಲ್ಲಿರುವ 36 ಅಂತಸ್ತಿನ ಜೆ.ಕೆ. ಹೌಸ್‍ನಿಂದ ವಿಜಯಪತ್ ಅವರನ್ನು ಮಗ ಗೌತಮ್ ಹೊರ ಹಾಕಿದ್ದಾರೆ. ಇದೀಗ ಬಾಡಿಗೆ ಮನೆಯಲ್ಲಿ ವಾಸವಾಗಿರುವ ವಿಜಯಪತ್ ಅವರು ಬಾಡಿಗೆ ಕಟ್ಟಲು ಹರಸಾಹಸ ಪಡುತ್ತಿದ್ದಾರೆ. ಇದರ ಜತೆಗೆ ಅವರಿಗೆ ನೀಡಿದ್ದ ಕಾರನ್ನು ಗೌತಮ್ ವಾಪಸ್ ಪಡೆದಿದ್ದಾರೆ ಎಂದು ವರದಿ ಮಾಡಲಾಗಿದೆ. ತಾನೇ ಕಟ್ಟಿದ್ದ ಬೃಹತ್ ಕಟ್ಟಡದಲ್ಲಿನ ಒಂದು ಡ್ಯುಪ್ಲೆಕ್ಸ್ ಅನ್ನು ತಮಗೆ ಮರಳಿಸುವಂತೆ ವಿಜಯ್‍ಪತ್ ಅವರು ನ್ಯಾಯಾಲಯದ ಮೊರೆ ಹೋಗಿದ್ದು, ಅಲ್ಲಿ ಅವರ ಪರ ವಕೀಲರು ಉದ್ಯಮಿಯ ಈ ಕರುಣಾಜನಕ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ವಿಜಯ್ಪತ್ ಸಿಂಘಾನಿಯಾ ದಶಕಗಳ ಕಾಲ ರೇಮಂಡ್ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ದಶಕಗಳ ಹಿಂದೆ ಅವರ ಹಿರಿಯ ಪುತ್ರ, ತನಗೆ ಯಾವುದೇ ಆಸ್ತಿ ಬೇಡ ಎಂದು ಕುಟುಂಬ ಸಮೇತ ವಿದೇಶಕ್ಕೆ ತೆರಳಿದ್ದರು. ಬಳಿಕ ವಿಜಯ್ಪತ್, ತಮ್ಮ ಕಿರಿಯ ಪುತ್ರ ಗೌತಮ್ಗೆ ಕಂಪನಿಯ ಹೊಣೆ ವಹಿಸಿದ್ದರು. ಗೌತಮ್ ಕೂಡಾ ಕಂಪನಿಯನ್ನು ಯಶಸ್ವಿಯಾಗಿಯೇ ಮುನ್ನಡೆಸಿದ್ದರು. ಈ ನಡುವೆ 2015ರಲ್ಲಿ ವಿಜಯ್ಪತ್ ಸಿಂಘಾನಿಯಾ ತಮ್ಮ ಹೆಸರಿನಲ್ಲಿದ್ದ 1000 ಕೋಟಿ ರು.ಮೌಲ್ಯದ ಕಂಪನಿಯ ಷೇರು, ಆಸ್ತಿಯನ್ನು ಪುತ್ರ ಗೌತಮ್’ಗೆ ಬರೆದುಕೊಟ್ಟಿದ್ದರು. ಅದಾದ ಬಳಿಕ ಪುತ್ರ ಹಂತಹಂತವಾಗಿ ತಂದೆಯನ್ನು ಕಡೆಗಣಿಸುತ್ತಾ ಬಂದಿದ್ದು, ಬಳಿಕ ಮನೆಯಿಂದಲೇ ಹೊರಹಾಕಿದ್ದಾರೆ. ಹೀಗಾಗಿ ವಿಜಯಪತ್ ಅವರೀಗ ದಕ್ಷಿಣ ಮುಂಬೈನಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುವ ಪರಿಸ್ಥಿತಿ ಎದುರಾಗಿದೆ. ತಂದೆಗೆ ನೀಡಿದ್ದ ಕಾರು ಮತ್ತು ಕಾರು ಚಾಲಕನನ್ನೂ ಹಿಂದಕ್ಕೆ ಪಡೆದಿದ್ದಾರೆ. ತಾವೇ ಕಂಪನಿಯ ಅಧ್ಯಕ್ಷರಾಗಿದ್ದಾಗ ವಿಜಯ್’ಪತ್ ಅವರು ಕಂಪನಿಯ ಹೆಸರಲ್ಲಿ ಮುಂಬೈನ ಮಲಬಾರ್ ಹಿಲ್’ನಲ್ಲಿ 16 ಮಹಡಿಯ ಜೆಕೆ ಹೌಸ್ ಎಂಬ ಬಹುಮಹಡಿ ಕಟ್ಟಡ ಕಟ್ಟಿದ್ದರು. ಕೆಲ ವರ್ಷಗಳ ಹಿಂದೆ ಇದನ್ನು ಮರುನವೀಕರಣ ಮಾಡಿ 36 ಅಂತಸ್ತಿನ ಕಟ್ಟಡವಾಗಿ ಪುನರ್ ನಿರ್ಮಿಸಲಾಗಿತ್ತು. ಈ ಕಟ್ಟಡದಲ್ಲಿ ನಾಲ್ಕು ಡ್ಯುಪ್ಲೆಕ್ಸ್’ಗಳಿದ್ದವು. ಈ ಪೈಕಿ ಒಂದು ವಿಜಯ್’ಪತ್’ಗೆ, ಇನ್ನೊಂದು ಗೌತಮ್’ಗೆ, ಉಳಿದೆರಡು ವಿಜಯಪತ್ ಅವರ ಸೋದರ ಅಜಯ್ ಪತ್ ಕುಟುಂಬಕ್ಕೆ ಸೇರಬೇಕು ಎಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ನವೀಕರಣದ ಬಳಿಕ ಎಲ್ಲಾ 4 ಡ್ಯುಪ್ಲೆಕ್ಸ್’ಗಳನ್ನು ಸ್ವತಃ ಗೌತಮ್ ಕಬಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Also Read  ವಿಶ್ವದಲ್ಲೇ ಅತೀ ಶ್ರೀಮಂತ ಭಿಕ್ಷುಕ ಎಂಬ ಖ್ಯಾತಿಗೆ ಪಾತ್ರರಾದ ಮುಂಬಯಿಯ ಭಿಕ್ಷುಕ

ವಿಜಯಪತ್ ಅವರು ಈಗ ಮಲಬಾರ್ ಹಿಲ್ ನಲ್ಲಿರುವ 36 ಅಂತಸ್ತಿನ ಜೆಕೆ ಹೌಸ್ ನಲ್ಲಿ ಒಂದು ಡುಫ್ಲೆಕ್ಸ್ ಮನೆ, ಕಾರು ಹಾಗೂ ಪ್ರತಿ ತಿಂಗಳು 7 ಲಕ್ಷ ರುಪಾಯಿ ಹಣವನ್ನು ಕೊಡಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ನಿವೃತ್ತ ಉದ್ಯಮಿ ವಿಜಯಪತ್ ಅವರು ಬಿಡಿಗಾಸಿಗೂ ಪರದಾಡುತ್ತಿದ್ದಾರೆ ಎಂದು ಅವರ ಪರ ವಾದಿಸುತ್ತಿರುವ ವಕೀಲರು ಹೇಳಿರುವುದಾಗಿ ಮುಂಬೈ ಮಿರರ್ ವರದಿ ಮಾಡಿದೆ.

error: Content is protected !!
Scroll to Top