ಉಪ್ಪಳ: ಕರ್ನಾಟಕ ನೋಂದಣಿಯ ಕಾರಿನಲ್ಲಿ 19 ರ ಹರೆಯದ ಯುವತಿಯ ಅಪಹರಣ ➤ ಆಕ್ರೋಶದಿಂದ ಕಾರನ್ನು ಅಡ್ಡಗಟ್ಟಿ ಧ್ವಂಸಗೈದು ಯುವತಿಯನ್ನು ರಕ್ಷಿಸಿದ ಊರವರು ➤ ಪೊಲೀಸರಿಂದ ಲಾಠಿ ಚಾರ್ಜ್ – ಉಪ್ಪಳ ಉದ್ವಿಗ್ನ

(ನ್ಯೂಸ್ ಕಡಬ) newskadaba.com ಕಾಸರಗೋಡು, ಮೇ.13. ಸುಮಾರು 19 ವರ್ಷ ಪ್ರಾಯದ ಯುವತಿಯೋರ್ವಳನ್ನು ಮಂಗಳೂರು ನೋಂದಾಯಿತ ಸ್ವಿಫ್ಟ್ ಕಾರಿನಲ್ಲಿ ಅಪಹರಿಸುತ್ತಿದ್ದುದನ್ನು ಗಮನಿಸಿದ ಊರವರು ಕಾರನ್ನು ತಡೆದು ಹಾನಿಗೊಳಿಸಿದ ಘಟನೆ ಕಾಸರಗೋಡಿನ ಉಪ್ಪಳದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ.

ಉಪ್ಪಳದ ಪೆರ್ಮುದ ಎಂಬಲ್ಲಿನ ಮನೆಯೊಂದರ ಮುಂಭಾಗದಲ್ಲಿ ನಿಂತಿದ್ದ ಯುವತಿಯನ್ನು ಬಲವಂತವಾಗಿ ಕರ್ನಾಟಕದ ನೋಂದಣಿಯ ಕಾರಿಗೆ ಎಳೆದು ಹಾಕಿ ಅಪಹರಿಸಲು ಯತ್ನಿಸುತ್ತಿದ್ದಾಗ ಸ್ಥಳೀಯರು ಗಮನಿಸಿದ್ದು, ಈ ವೇಳೆ ಸ್ಥಳೀಯರನ್ನು ಕಂಡು ಪರಾರಿಯಾಗುವ ಧಾವಂತದಲ್ಲಿ ಅಪಹರಣಕಾರರ ಕಾರು ಹಲವು ವಾಹನಗಳಿಗೆ ಢಿಕ್ಕಿಯಾಗಿದೆ. ಈ ನಡುವೆ ಉಪ್ಪಳ ಪೇಟೆಯಲ್ಲಿ ಕಾರನ್ನು ತಡೆಗಟ್ಟುವಲ್ಲಿ ಊರವರು ಯಶಸ್ವಿಯಾದರಾದರೂ, ಅಪಹರಣಕಾರರು ಕತ್ತಲಲ್ಲಿ ಓಡಿ ಪರಾರಿಯಾಗಿದ್ದಾರೆ.

ರೊಚ್ಚಿಗೆದ್ದ ಊರವರು ಯುವತಿಯನ್ನು ರಕ್ಷಿಸಿದ್ದು, ಕಾರನ್ನು ಧ್ವಂಸಗೊಳಿಸಿದ್ದಾರೆ. ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿನ ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದು, ಪರಿಸ್ಥಿತಿಯನ್ನು ಹದ್ದುಬಸ್ತಿನಲ್ಲಿ ಇಟ್ಟಿದ್ದಾರೆ.

error: Content is protected !!

Join the Group

Join WhatsApp Group