ಇನ್ಮುಂದೆ ವರದಕ್ಷಿಣೆ ದೂರು ನೀಡಿದಾಕ್ಷಣ ಯಾರನ್ನೂ ಬಂಧಿಸುವಂತಿಲ್ಲ ► ಕಾರಣವೇನೆಂದು ಗೊತ್ತೇ…?

(ನ್ಯೂಸ್ ಕಡಬ) newskadaba.com ನವದೆಹಲಿ, ಜು.28. 1983ರಲ್ಲಿ ರಚನೆಯಾದ ವರದಕ್ಷಿಣೆ ವಿರೋಧಿ ಕಾನೂನನ್ನು ಹಲವು ಮಹಿಳೆಯರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಹಲವು ವರ್ಷಗಳಿಂದ ದೂರುಗಳು ದಾಖಲಾಗಿರೋ ಹಿನ್ನೆಲೆಯಲ್ಲಿ ವರದಕ್ಷಿಣೆ ಪ್ರಕರಣಗಳಲ್ಲಿ ಪ್ರಾಥಮಿಕ ತನಿಖೆ ನಡೆಸದೆ ಇನ್ಮುಂದೆ ಯಾರನ್ನೂ ಶೀಘ್ರವೇ ಬಂಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

ವಿವಾಹಿತ ಮಹಿಳೆಗೆ ಪತಿ ಅಥವಾ ಆತನ ಕುಟುಂಬದಿಂದಾಗುವ ಹಿಂಸೆಯನ್ನು ತಡೆಯುವ ಸಲುವಾಗಿ ವರದಕ್ಷಿಣೆ ವಿರೋಧಿ ಕಾನೂನನ್ನು ಜಾರಿಗೆ ತರಲಾಗಿದ್ದು, ಕಾನೂನಿನ ದುರ್ಬಳಕೆ ಆಗುತ್ತಿರುವುದರಿಂದ ದೇಶದಾದ್ಯಂತ ಪ್ರತಿ ಜಿಲ್ಲೆಯಲ್ಲೂ ಕುಟುಂಬ ಕಲ್ಯಾಣ ಸಮಿತಿಗಳನ್ನ ಸ್ಥಾಪಿಸಬೇಕು ಎಂದು ನ್ಯಾ. ಎ.ಕೆ ಗೋಯಲ್ ಹಾಗೂ ಯು.ಯು ಲಲಿತ್ ನೇತೃತ್ವದ ಪೀಠ ಹೇಳಿದೆ. ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ದಾಖಲಿಸಲಾದ ಯಾವುದೇ ವರದಕ್ಷಿಣೆ ಕಿರುಕುಳ ಪ್ರಕರಣವನ್ನ ಮೊದಲು ಸಮಿತಿಗೆ ನೀಡಬೇಕು. ಸಮಿತಿಯು ಅದನ್ನು ಪರಿಶೀಲಿಸಬೇಕು ಎಂದು ಕೋರ್ಟ್ ಹೇಳಿದೆ. ಅಲ್ಲದೆ ಸಮಿತಿಯು ಪಾಲಿಸಬೇಕಾದ ಕಾರ್ಯವಿಧಾನಗಳನ್ನೂ ಕೂಡ ಕೋರ್ಟ್ ತಿಳಿಸಿದೆ. ಮೊದಲು ದಂಪತಿ ಹಾಗೂ ಅವರ ಕುಟುಂಬದವರನ್ನ ಕರೆಸಿ ವಿಷಯವನ್ನ ಚರ್ಚಿಸಬೇಕು. ನಂತರ ಸ್ಥಳೀಯ ಮ್ಯಾಜಿಸ್ಟ್ರೇಟ್‍ಗೆ ಸಮಿತಿ ವರದಿ ಸಲ್ಲಿಸಬೇಕು. ಪತಿ ಕಿರುಕುಳ ನೀಡಿದ ಬಗ್ಗೆ ಸಮಿತಿ ಉಲ್ಲೇಖಿಸಿದಲ್ಲಿ ಮಾತ್ರ ಬಂಧನ ಮಾಡಬೇಕು ಎಂದು ಕೋರ್ಟ್ ಹೇಳಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ 2014ರ ಜುಲೈನಲ್ಲಿ ನ್ಯಾಯಾಲಯವು 40 ಅಂಶಗಳ ಪಟ್ಟಿ ನೀಡಿ, ಪೊಲೀಸರು ಯಾವುದೇ ಬಂಧನ ಮಾಡುವ ಮುನ್ನ ಇದನ್ನ ನೋಡಬೇಕು ಎಂದು ಹೇಳಿತ್ತು. ಅಲ್ಲದೆ ವರದಕ್ಷಿಣೆ ವಿರೋಧಿ ಕಾನೂನಿನ ದುರ್ಬಳಕೆ ತಪ್ಪಿಸಲು ಅದನ್ನು ತಿದ್ದುಪಡಿ ಮಾಡುವಂತೆ ಕಾನೂನು ಸಚಿವಾಲಯಕ್ಕೆ ಸಲಹೆಯನ್ನೂ ನೀಡಿತ್ತು. ರಾಜೇಶ್ ಶರ್ಮಾ ಎಂಬವರು ಅಲಾಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದು, ಇದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ.

 

error: Content is protected !!

Join the Group

Join WhatsApp Group