ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ► ಕೊಕ್ಕಡ ಮೂಲದ ವ್ಯಕ್ತಿ ಪೋಲೀಸ್ ವಶಕ್ಕೆ..?

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು.29. ಸಾಮಾಜಿಕ ಮುಂದಾಳು, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನೆಲ್ಯಾಡಿ ಸಮೀಪದ ಕೊಕ್ಕಡ ಮೂಲದ ಓರ್ವನನ್ನು ಭಾನುವಾರದಂದು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿರುವ ಮಾಹಿತಿ ಮಾಧ್ಯಮಗಳಿಗೆ ಲಭಿಸಿದ್ದು, ಆದರೆ ಪೊಲೀಸರು ಇದನ್ನು ಧೃಡಪಡಿಸಿಲ್ಲ.

ಕೊಕ್ಕಡ ನಿವಾಸಿ ಜಯರಾಮ ಕೆ. ಯಾನೆ ಪೊಡಿಯ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ಹಲವು ದಿನಗಳಿಂದ ಈತನನ್ನು ಹುಡುಕುತ್ತಿದ್ದ ಪೊಲೀಸರು ಭಾನುವಾರ ಸಂಜೆ ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಪೊಲೀಸರು ಭಾಗಿಯಾಗಿದ್ದಾರೆ ಎನ್ನುವ ಮಾಹಿತಿ ಇದ್ದು, ಒಂದು ಮೂಲದ ಪ್ರಕಾರ ಈತನನ್ನು ವಿಚಾರಣೆ ನಡೆಸಿ ಬಿಡಲಾಗಿದೆ ಎನ್ನಲಾಗುತ್ತಿದೆ. ಈತನನ್ನು ಬಿಡಲಾಗಿದೆಯೋ ಅಥವಾ ಗುಪ್ತ ಜಾಗದಲ್ಲಿಟ್ಟು ವಿಚಾರಣೆ ನಡೆಸಲಾಗುತ್ತಿದೆಯೋ, ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ವಶಕ್ಕೆ ಒಪ್ಪಿಸಲಾಗಿದೆಯೋ ಎಂಬ ಬಗ್ಗೆ ಪೊಲೀಸರು ಬಾಯಿ ಬಿಡುತ್ತಿಲ್ಲ. ಬಂಧಿತ ಜಯರಾಮ ಹಲವಾರು ವರ್ಷಗಳಿಂದ ಸನಾತನ ಸಂಸ್ಥೆಯಲ್ಲಿ ಸಕ್ರೀಯವಾಗಿದ್ದ ಎನ್ನಲಾಗಿದೆ. ಬಳಿಕ ವಿವಾಹವಾಗಿ ನಿಡ್ಲೆ ಸಮೀಪದ ಮನೆಯೊಂದರಲ್ಲಿ ವಾಸ್ತವ್ಯವಿದ್ದ. ಈತನನ್ನು ವಶಕ್ಕೆ ಪಡೆದಿರುವುದು ನಿಜವಾಗಿದ್ದು, ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಶಕ್ಕೆ ಪಡೆಯಲಾಗಿದೆಯೇ..? ಅಥವಾ ಬೇರೆ ಯಾವುದೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗಿದೆಯೇ..? ಆಮೇಲೆ ಈತನನ್ನು ವಿಚಾರಣೆ ನಡೆಸಿ ಬಿಡಲಾಗಿದೆಯೇ? ಬಂಧಿಸಲಾಗಿದೆಯೇ.? ಎಂಬ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

error: Content is protected !!

Join the Group

Join WhatsApp Group