(ನ್ಯೂಸ್ ಕಡಬ) newskadaba.com ಆ. 28. ಕಾಡಾನೆಗಳ ಹಿಂಡೊಂದು ಇದೀಗ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮಕ್ಕೆ ಲಗ್ಗೆಯಿಟ್ಟಿದ್ದು, ಐತ್ತೂರು ಗ್ರಾಮದ ಕೋರಿಯಾರ್ ಸಮೀಪದ ತೋಟದಲ್ಲಿ ಬೀಡುಬಿಟ್ಟಿರುವುದು ಸ್ಥಳೀಯ ಕೃಷಿಕರು ಹಾಗೂ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ.
ಒಂದು ಮರಿಯಾನೆ ಸೇರಿದಂತೆ ಒಟ್ಟು ಆರು ಕಾಡಾನೆಗಳು ಈ ಹಿಂಡಿನಲ್ಲಿರುವುದು ಕಂಡುಬಂದಿದೆ. ಮೊದಲಿಗೆ ಬಳ್ಪ ಗ್ರಾಮದ ಪಠೋಳಿ ಭಾಗದಲ್ಲಿ ಕಾಡಾನೆಗಳು ಸಂಚರಿಸಿದ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. ಬಳಿಕ ಪಠೋಳಿಯಿಂದ ಕಣ್ಕಲ್ ಭಾಗದತ್ತ ತೆರಳಿದ ಆನೆಗಳು, ದಾರಿಯುದ್ದಕ್ಕೂ ಬೈನೆ ಮರಗಳನ್ನು ಮುರಿದು ಹಾಕಿ ಹಾನಿಯುಂಟು ಮಾಡಿದ್ದವು.
ಅಲ್ಲಿಂದ ಮುಂದೆ ಸಾಗಿದ ಕಾಡಾನೆಗಳ ಹಿಂಡು ಎಣ್ಣೆಮಜಲು ಬಳಿಯ ಬೀರಿಕಾಡು ಪ್ರದೇಶದಲ್ಲಿ ಸಂಚರಿಸಿ ನಂತರ ನದಿಯನ್ನು ದಾಟಿ ಕೋಡಿಂಬಾಳ ಗ್ರಾಮದ ಕೋರಿಯಾರ್ ಸಮೀಪವಿರುವ ರಬ್ಬರ್ ತೋಟಕ್ಕೆ ಪ್ರವೇಶಿಸಿ ಅಲ್ಲಿಯೇ ಠಿಕಾಣಿ ಹೂಡಿದ್ದು, ಇದರಿಂದಾಗಿ ಐತ್ತೂರು ಮತ್ತು ಕೋಡಿಂಬಾಳ ಉಭಯ ಗ್ರಾಮಗಳ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಕೆಲಸಕ್ಕೆ ತೆರಳುವ ಕಾರ್ಮಿಕರು , ಕೃಷಿಕರು ಹಾಗೂ ಶಾಲಾ ಮಕ್ಕೆಳು ಆತಂಕಕ್ಕೊಳಗಾಗಿದ್ದಾರೆ.
ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಅಗಮಿಸಿ ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ಅಗತ್ಯ ಕಾರ್ಯಾಚರಣೆ ಕೈಗೊಂಡಿದ್ದಾರೆ.








