(ನ್ಯೂಸ್ ಕಡಬ) newskadaba.com, ಆಗಸ್ಟ್ 29 ಅಮ್ರೋಹ : ದೇಶದ ಹಲವೆಡೆ ಇನ್ನೂ ವರದಕ್ಷಿಣೆಯೆಂಬ ಪೆಂಡಭೂತ ಮಾಯವಾದಂತಿಲ್ಲ. ಅದೆಷ್ಟೋ ಹೆಣ್ಮಕ್ಕಳು ಇದರಿಂದ ನರಳಿದ್ದಾರೆ, ಪ್ರಾಣತೆತ್ತಿದ್ದಾರೆ. ಹೆಣ್ಣಿಗೆ ಹೆಣ್ಣೇ ಶತ್ರು ಎಂಬಂತೆ ಅತ್ತೆಯಾದವಳು ಕೂಡ ಅರ್ಥ ಮಾಡಿಕೊಳ್ಳದೆ ಸೊಸೆಯನ್ನು ವರದಕ್ಷಿಣೆಗಾಗಿ ಹಿಂಸಿಸಿದ ಅದೆಷ್ಟೋ ಪ್ರಕರಣಗಳಿವೆ. ಇದೀಗ ವರದಕ್ಷಿಣೆಯ ಕ್ರೌರ್ಯಕ್ಕೆ ಮಹಿಳೆಯೊಬ್ಬಳು ಬಲಿಯಾಗಿದ್ದಾಳೆ. ಅತ್ತೆ-ಮಾವ ಇಬ್ಬರೂ ಸೇರಿ ಬಲವಂತವಾಗಿ ಸೊಸೆಗೆ ಆಸಿಡ್ ಕುಡಿಸಿದ ಪರಿಣಾಮ 23 ವರ್ಷದ ಮಹಿಳೆ ದುರಂತವಾಗಿ ಸಾವಿಗೀಡಾಗಿದ್ದಾಳೆ. ಈ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯ ಕಲಖೇಡ ಎಂಬಲ್ಲಿ ನಡೆದಿದೆ.
ನಿತ್ಯ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಅತ್ತೆ-ಮಾವ ಇದೀಗ ಸೊಸೆಯನ್ನು ಆಸಿಡ್ ಕುಡಿಸಿ ಹತ್ಯೆ ಮಾಡಿದ್ದಾರೆ. ಹತ್ಯೆಯಾದ ಮಹಿಳೆಯನ್ನು ಗುಲ್ಫಿಜಾ ಎಂದು ಗುರುತಿಸಲಾಗಿದೆ. ಸುಮಾರು ಒಂದು ವರ್ಷದ ಹಿಂದೆ ದಿದೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕಲಖೇಡ ಗ್ರಾಮದಲ್ಲಿ ಪರ್ವೇಜ್ ಅವರನ್ನು ವಿವಾಹವಾಗಿದ್ದರು. ಆಕೆಯ ಕುಟುಂಬದವರ ಪ್ರಕಾರ, ಅತ್ತೆ-ಮಾವಂದಿರು 10 ಲಕ್ಷ ರೂಪಾಯಿ ನಗದು ಮತ್ತು ಕಾರಿಗೆ ಬೇಡಿಕೆ ಇಡುತ್ತಿದ್ದರು ಎಂದು ಆರೋಪಿಸಲಾಗಿದೆ
. ಆಗಸ್ಟ್ 11 ರಂದು ಆರೋಪಿಗಳು ಗಲ್ಫಿಜಾಗೆ ಬಲವಂತವಾಗಿ ಆಸಿಡ್ ಕುಡಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯು 17 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿದ ನಂತರ ಗುರುವಾರ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಗಲ್ಫಿಜಾ ತಂದೆ ಫುರ್ಕನ್ ನೀಡಿದ ದೂರಿನ ಮೇರೆಗೆ ಪರ್ವೇಜ್, ಅಸಿಮ್, ಗುಲಿಸ್ತಾ, ಮೋನಿಶ್, ಸೈಫ್, ಡಾ ಭೂರಾ ಮತ್ತು ಬಬ್ಬು ಎಂಬ ಏಳು ಜನರ ವಿರುದ್ಧ ಬಿಎನ್ಎಸ್ನ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರೇಟರ್ ನೋಯ್ಡಾದಲ್ಲಿ ಇತ್ತೀಚೆಗೆ ನಡೆದ ವರದಕ್ಷಿಣೆ ಸಾವಿನ ಪ್ರಕರಣದ ಬೆನ್ನಲ್ಲೇ ಈ ಮನಕಲಕುವ ಘಟನೆ ನಡೆದಿದೆ. ವರದಕ್ಷಿಣೆ ವಿಚಾರವಾಗಿ ಸಿರ್ಸಾ ಗ್ರಾಮದಲ್ಲಿ 26 ವರ್ಷದ ಮಹಿಳೆಯೊಬ್ಬಳನ್ನು ಆಕೆಯ ಗಂಡನ ಮನೆಯಲ್ಲಿ ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿತ್ತು. ಘಟನೆ ಸಂಬಂಧ ಪೊಲೀಸರು ಆಕೆಯ ಮಾವ, ಪತಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದರು









