(ನ್ಯೂಸ್ ಕಡಬ) newskadaba.com ಮಾ. 14 ಬೆಂಗಳೂರು: ಬೆಂಗಳೂರು ಜಲಮಂಡಳಿ ಪೂರೈಕೆ ಮಾಡುವ ಕಾವೇರಿ ನೀರಿನ ಗುಣಮಟ್ಟ ಪರೀಕ್ಷೆಯಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಮಾನ್ಯತೆ ಪಡೆದಿದೆ. ಈ ಮೂಲಕ ದೇಶದಲ್ಲೇ ಮೊದಲ ಬಾರಿಗೆ ‘ಬಿಐಎಸ್’ನಿಂದ ಪ್ರಮಾಣ ಪತ್ರ ಪಡೆದ ಹೆಗ್ಗಳಿಕೆಗೆ ಬೆಂಗಳೂರು ಜಲಮಂಡಳಿ ಪಾತ್ರವಾಗಿದೆ.

ಕೊಳವೆ ಮೂಲಕ ನೀರು ಪೂರೈಕೆ ಮಾಡುವ ಸಂಸ್ಥೆಯು ಬಿಐಎಸ್ ಪ್ರಮಾಣ ಪತ್ರ ಪಡೆದಿರುವುದು ದೇಶದಲ್ಲೇ ಮೊದಲಾಗಿದೆ. ಕಳೆದ ಆರು ತಿಂಗಳಿನಿಂದ ವಿವಿಧ ಹಂತಗಳಲ್ಲಿ ನಡೆದ ಬಿಐಎಸ್ ಕಠಿಣ ಪರೀಕ್ಷೆಗಳಲ್ಲಿ ಬೆಂಗಳೂರು ಜಲಮಂಡಳಿ ತೇರ್ಗಡೆಯಾಗಿತ್ತು. ನೀರು ಸರಬರಾಜು ವ್ಯವಸ್ಥೆಯಲ್ಲಿ ಜಲಮಂಡಳಿ ಅಳವಡಿಸಿಕೊಂಡಿರುವ ಅಂತಾರಾಷ್ಟ್ರೀಯ ಮಾನದಂಡಗಳ ಬಗ್ಗೆ ಬಿಐಎಸ್ ತಂಡ ಶ್ಲಾಘಿಸಿದ್ದು, ಪ್ರಮಾಣ ಪತ್ರ ನೀಡಿದೆ.
ಬೆಂಗಳೂರು ಜಲಮಂಡಳಿಗೆ ಬಿಐಎಸ್ ಪ್ರಾಮಾಣೀಕರಣ ದೊರೆತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ| ರಾಮಪ್ರಸಾತ್ ಮನೋಹರ್ ಹೇಳಿದ್ದಾರೆ.