7 ವರ್ಷದ ಬಾಲಕನನ್ನು ಕಾಲುವೆಗೆ ಎಸೆದು ಕೊಲೆಗೈದ ಆರೋಪಿಯ ಬಂಧನ

crime, arrest, suspected

(ನ್ಯೂಸ್ ಕಡಬ) newskadaba.com ವಿಜಯನಗರ, ಅ.26. ವ್ಯಕ್ತಿಯೋರ್ವ ಏಳು ವರ್ಷದ ಬಾಲಕನನ್ನು ಹರಿಯುವ ನೀರಿನ ಅಡವಿ (ಎಚ್.ಎಲ್.ಸಿ.) ಕಾಲುವೆಗೆ ಎಸೆದು ಕೊಲೆಗೈದಿರುವ ಘಟನೆ ಕಮಲಾಪುರ ಪಟ್ಟಣ ವ್ಯಾಪ್ತಿಯಲ್ಲಿ ನಡೆದಿದೆ.

ಕೊಲೆಯಾದ ಬಾಲಕನನ್ನು ಕಮಲಾಪುರದ ರಾಜಮ್ಮ ಮತ್ತು ಬಾಬು ದಂಪತಿಯ ಪುತ್ರ ಅಭಿ(7) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಯನ್ನು ಕಮಲಾಪುರ ನಿವಾಸಿ ಓಬಳೇಶ್ (24) ಎಂದು ಗುರುತಿಸಲಾಗಿದೆ. ಪರಿಚಯಸ್ಥನಾಗಿದ್ದ ಓಬಳೇಶ ಅ.22ರಂದು ಬೆಳಗ್ಗೆ ಅಭಿಯನ್ನು ತನ್ನ ಸ್ಕೂಟರ್ ನಲ್ಲಿ ಶಾಲೆಗೆ ಕರೆದುಕೊಂಡು ಹೋಗಿದ್ದಾನೆ. ಶಾಲೆಯಲ್ಲಿ ಬ್ಯಾಗ್ ಇರಿಸಿ ಅಭಿಯನ್ನು ಮತ್ತೆ ಕರೆದುಕೊಂಡು ಕಮಲಾಪುರ ಗಾರೆ ಭಾವಿ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿರುವ ಪಿ.ಕೆ.ಹಳ್ಳಿ ರಸ್ತೆ ಮಧ್ಯದಲ್ಲಿರುವ ಅಡವಿ (ಎಚ್ ಎಲ್ ಸಿ) ಕಾಲುವೆ ಮೇಲಿನ ಸೇತುವೆಯಿಂದ ಕೆಳಗೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕನ ಮೃತದೇಹ ಪತ್ತೆಯಾಗಿದ್ದು, ಮೃತ ಬಾಲಕನ ತಾಯಿ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

error: Content is protected !!
Scroll to Top