(ನ್ಯೂಸ್ ಕಡಬ) newskadaba.com, ಜೂ.29: ಪುತ್ತೂರು ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ತೆರಳುತ್ತಿದ್ದ ಕರ್ತವ್ಯ ನಿರತ ವೈದ್ಯರ ಕೆಲಸಕ್ಕೆ ಅಡ್ಡಿಪಡಿಸಿ, ಸುಳ್ಳು ಆರೋಪ ಹೊರಿಸಿದವರ ವಿರುದ್ಧ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.ಡಿಸೆಂಬರ್ 10 ರಂದು ಪುಂಜಾಲಕಟ್ಟೆಯಿಂದ ಕರೆತಂದ 29 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆಗೆ ಪುಂಜಾಲಕಟ್ಟೆ ಪೊಲೀಸರು ಮಧ್ಯಾಹ್ನದ ಬಳಿಕ ಬಂದು ಪ್ರಕ್ರಿಯೆಗಳನ್ನು ಮುಗಿಸಿದ್ದರು.
ಸಂಜೆ ವೇಳೆ ಕರ್ತವ್ಯದಲ್ಲಿದ್ದ ಡಾ. ಶ್ವೇತಾ ಅವರು ಮರಣೋತ್ತರ ಪರೀಕ್ಷೆಗೆ ತೆರಳುವಾಗ, ಮೃತರ ಕಡೆಯವರು “ವೈದ್ಯರು ತಡವಾಗಿ ಬಂದಿದ್ದಾರೆ” ಎಂದು ಸುಳ್ಳು ಆರೋಪ ಮಾಡಿ ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದರು. ತಾವು ಶಸ್ತ್ರಚಿಕಿತ್ಸೆಯಲ್ಲಿದ್ದ ಕಾರಣ ತಡವಾಗಿದೆ ಎಂದು ವೈದ್ಯರು ವಿವರಿಸಿದರೂ ಅವರು ಕೇಳಿರಲಿಲ್ಲ.
ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಿದವರ ವಿರುದ್ಧ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಡಾ. ಶ್ವೇತಾ ಮತ್ತು ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ ಅವರು ಜಂಟಿಯಾಗಿ ದೂರು ದಾಖಲಿಸಿದ್ದಾರೆ.









