ಅರಣ್ಯಶಾಸ್ತ್ರ ಓದಿದವರಿಗೆ ಮಾತ್ರ ಅರಣ್ಯ ಇಲಾಖೆಯಲ್ಲಿ ಅವಕಾಶ ಕೊಡಿ- ವಿದ್ಯಾರ್ಥಿಗಳ ಆಗ್ರಹ

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಫೆ. 24. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪವಲಯ ಅರಣ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಬಿ.ಎಸ್ಸಿ ಅರಣ್ಯಶಾಸ್ತ್ರ ಪದವಿ ಪಡೆದವರಿಗೆ ಮಾತ್ರ ಮೀಸಲಿಡಬೇಕು ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ವಿ.ವಿ.ಯ ಅರಣ್ಯ ಶಾಸ್ತ್ರ ಪದವಿ ವಿದ್ಯಾರ್ಥಿಗಳು ಆಗ್ರಹಿಸಿದರು.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿನಿ ಶ್ರೀನಿಧಿ, ಸರಕಾರವು ಅರಣ್ಯ ಇಲಾಖೆಯ ಹುದ್ದೆಗಳಿಗೆ ಬಿ.ಎಸ್ಸಿ ಅರಣ್ಯಶಾಸ್ತ್ರವಲ್ಲದ ಇತರೆ ವಿಜ್ಞಾನ ವಿಭಾಗದ ಪದವಿ ವಿದ್ಯಾರ್ಥಿಗಳಿಗೂ ಅರ್ಜಿ ಹಾಕಲು ಅವಕಾಶ ಮಾಡಿಕೊಟ್ಟಿದ್ದು, ಅರಣ್ಯ ಶಾಸ್ತ್ರ ಪದವಿ ಪಡೆದವರಿಗೆ ಶೇ. 50 ರಷ್ಟು ಮಾತ್ರ ಹುದ್ದೆಗಳ ಮೀಸಲಿಟ್ಟಿದೆ. ಇದು ಸಾಕಾಗುವುದಿಲ್ಲ. ಎಲ್ಲಾ ಹುದ್ದೆಗಳನ್ನು ಅರಣ್ಯ ಶಾಸ್ತ್ರ ಪದವೀಧರರಿಗೆ ಕೊಡಬೇಕು ಎಂದು ಆಗ್ರಹಿಸಿದರು. 2018ರಿಂದ 1200ಕ್ಕೂ ಹೆಚ್ಚು ಪದವೀಧರರು ಅರಣ್ಯ ಇಲಾಖೆಯಲ್ಲಿನ ಹುದ್ದೆಗಳ ಭರ್ತಿಗಾಗಿ ಕಾಯುತ್ತಿದ್ದಾರೆ. ಆದರೆ, ಇದುವರೆಗೂ ನೇಮಕಾತಿ ಮಾಡಿಕೊಂಡಿಲ್ಲ. ಹೀಗೆ ಮುಂದುವರೆದರೆ ಸಾವಿರಾರು ಅರಣ್ಯ ಶಾಸ್ತ್ರ ಪದವೀಧರರು ನಿರುದ್ಯೋಗಿಗಳಾಗಿಯೇ ಉಳಿಯುತ್ತಾರೆ. ಆದ್ದರಿಂದ ಅರಣ್ಯ ಇಲಾಖೆಯಲ್ಲಿ ಈಗ ಸುಮಾರು 3,226 ಹುದ್ದೆಗಳು ಖಾಲಿ ಇದ್ದು, ಅದರಲ್ಲಿ ಅಧಿಕಾರಿ ವರ್ಗದ ಹುದ್ದೆಗಳು ಇವೆ. ಈ ಎಲ್ಲಾ ಹುದ್ದೆಗಳಿಗೂ ಬಿ.ಎಸ್ಸಿ ಅರಣ್ಯಶಾಸ್ತ್ರ ಪದವಿ ಪಡೆದವರನ್ನೇ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

error: Content is protected !!

Join the Group

Join WhatsApp Group