(ನ್ಯೂಸ್ ಕಡಬ) newdkadaba.com ಸುಳ್ಯ, ಆ. 30. ಸುಮಾರು ಒಂದೂವರೆ ವರ್ಷದ ಚಿರತೆ ಮರಿಯೊಂದು ಉರುಳಿಗೆ ಸಿಲುಕಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಇಬ್ಬರ ವಿರುದ್ದ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಲಾದ ಘಟನೆ ತಾಲೂಕಿನ ಅಜ್ಜಾವರ ಗ್ರಾಮದ ಪಡ್ಡಂಬೈಲು ಎಂಬಲ್ಲಿಂದ ವರದಿಯಾಗಿದೆ.

ಬಂಧಿತರನ್ನು ಜಯರಾಮ ಪಡ್ಡಂಬೈಲು ಹಾಗೂ ಪೃಥ್ವಿ ಪಡ್ಡಂಬೈಲು ಎಂದು ಗುರುತಿಸಲಾಗಿದೆ. ಮಂಗಳವಾರದಂದು ಮಧ್ಯಾಹ್ನದ ವೇಳೆಗೆ ಚಿರತೆ ಉರುಳಿಗೆ ಬಿದ್ದಿರುವ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೊರೆತ ಮಾಹಿತಿಯಂತೆ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಚಿರತೆ ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಈ ಸಂದರ್ಭ ಅಧಿಕಾರಿಗಳು ತನಿಖೆ ನಡೆಸಿದಾಗ ಆರೋಪಿತರ ಬೇಲಿಯಲ್ಲಿ ಈ ಉರುಳು ಪತ್ತೆಯಾದ ಹಿನ್ನೆಲೆ ಇಬ್ಬರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.










