ಶಾಸಕ ಸ್ಥಾನಕ್ಕೆ ಹಾಲಾಡಿ ಶ್ರೀನಿವಾಸ್ ಶೆಟ್ಟಿ ರಾಜೀನಾಮೆ ► ಶೀಘ್ರದಲ್ಲೇ ಬಿಜೆಪಿ ಸೇರ್ಪಡೆ

(ನ್ಯೂಸ್ ಕಡಬ) newskadaba.com ಉಡುಪಿ, ಜ.31. ಕುಂದಾಪುರದ ಪಕ್ಷೇತರ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಬುಧವಾರದಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಅವರ ರಾಜೀನಾಮೆ ಪತ್ರವನ್ನು ವಿಧಾನಸಭೆಯ ಸ್ಪೀಕರ್ ಕೆ.ಬಿ.ಕೋಳಿವಾಡ ಅಂಗೀಕರಿಸಿದ್ದು, ಮೂರ್ನಾಲ್ಕು ದಿನಗಳಲ್ಲಿ ತಮ್ಮ ಮಾತೃ ಪಕ್ಷವಾದ ಬಿಜೆಪಿಗೆ ಮರು ಸೇರ್ಪಡೆಗೊಳ್ಳುವ ಎನ್ನಲಾಗಿದೆ. ಮೂರು ಬಾರಿ ಕುಂದಾಪುರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ಕೊಡದಿದ್ದಕ್ಕೆ ಬೇಸತ್ತು ಪಕ್ಷ ತೊರೆದಿದ್ದರು. ಹೀಗಾಗಿ 2013ರಲ್ಲಿ ಪಕ್ಷೇತರರಾಗಿ ನಿಂತು, ಬಿಜೆಪಿ ಅಭ್ಯರ್ಥಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿ ನಾಲ್ಕನೇ ಬಾರಿ ಗೆಲುವು ಸಾಧಿಸಿದ್ದರು.

ಕುಂದಾಪುರದಲ್ಲಿ ಹಾಲಾಡಿ ಅವರ ಪಕ್ಷ ಸೇರ್ಪಡೆಗೆ ಮೂಲ ಬಿಜೆಪಿಗರಿಂದ ತೀವ್ರ ಪ್ರತಿರೋಧ ಎದುರಾಗಿದ್ದು, ಈಗಾಗಲೇ ಯಡಿಯೂರಪ್ಪ ಅವರ ಪರಿವರ್ತನಾ ರ್ಯಾಲಿಯ ಸಂದರ್ಭದಲ್ಲಿ ಅದು ಬಹಿರಂಗ ಪ್ರದರ್ಶನಗೊಂಡಿತ್ತು. ಅಲ್ಲದೇ ಆರೆಸ್ಸೆಸ್ ಸಹ ಹಾಲಾಡಿ ಸೇರ್ಪಡೆಗೆ ವಿರೋಧ ಸೂಚಿಸಿದೆ ಎಂದು ವರದಿಯಾಗಿದ್ದು, ಈ ಎಲ್ಲವನ್ನು ನಿವಾರಿಸಿಕೊಂಡು ಹಾಲಾಡಿ ಪಕ್ಷಕ್ಕೆ ಸೇರ್ಪಡೆಗೊಂಡು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೇಟ್ ಪಡೆಯಲು ಯಶಸ್ವಿಯಾಗುವರೇ ಎಂಬುದನ್ನು ಕಾದು ನೋಡಬೇಕಿದೆ.

Also Read  ಕಾಸರಗೋಡು- ಗಾಂಜಾ ಸಹಿತ ಓರ್ವ ಅರೆಸ್ಟ್

error: Content is protected !!
Scroll to Top