ಶಾಸಕ ಯು.ಟಿ.ಖಾದರ್ ಕಾರನ್ನು ಹಿಂಬಾಲಿಸಿದ ಪ್ರಕರಣ ➤ ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.24. ಶಾಸಕ ಯು.ಟಿ.ಖಾದರ್ ಪ್ರಯಾಣಿಸುತ್ತಿದ್ದ ಕಾರನ್ನು ಅಪರಿಚಿತ ಬೈಕೊಂದು ಹಿಂಬಾಲಿಸಿದ ಪ್ರಕರಣದಲ್ಲಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಶಾಸಕ ಯು.ಟಿ.ಖಾದರ್ ರವರು ಬುಧವಾರದಂದು ದೇರಳಕಟ್ಟೆಯಲ್ಲಿ ನಡೆದ ಕಾರ್ಯಕ್ರಮವೊಂದನ್ನು ಮುಗಿಸಿ ರಾತ್ರಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ಈ ನಡುವೆ ದೇರಳಕಟ್ಟೆಯಿಂದ ಬೈಕೊಂದರಲ್ಲಿ ಇಬ್ಬರು ಅಪರಿಚಿತರು ಶಾಸಕರ ಕಾರನ್ನು ಅನುಮಾನಾಸ್ಪದವಾಗಿ ಹಿಂಬಾಲಿಸಿಕೊಂಡು ಬರುತ್ತಿರುವುದು ಗಮನಕ್ಕೆ ಬಂದಿದೆ ಎನ್ನಲಾಗಿದೆ. ನಂತೂರು ತಲುಪುವ ವೇಳೆ ಶಾಸಕರ ಎಸ್ಕಾರ್ಟ್ ವಾಹನವು ಬೈಕ್ ಸವಾರರನ್ನು ತಡೆದಿದ್ದು, ಈ ವೇಳೆ ಬೈಕ್ ಸವಾರರು ಸ್ಥಳದಿಂದ ಕಾಲ್ಕಿತ್ತಿದ್ದರು. ಈ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಅಪರಿಚಿತ ದುಷ್ಕರ್ಮಿಗಳು ಶಾಸಕ ಯು.ಟಿ.ಖಾದರ್ ರವರ ಹತ್ಯೆಗೆ ಯತ್ನಿಸಿದರೇ ಎಂಬ ಪ್ರಶ್ನೆ ಉದ್ಭವವಾಗಿತ್ತು. ಇದೀಗ ಆರೋಪಿಗಳ ಪೈಕಿ ಓರ್ವನನ್ನು ಪೊಲೀಸರು ಬಂಧಿಸಿದ್ದು, ಬಂಧಿತ ಆರೋಪಿಯನ್ನು ಬೋಳೂರು ನಿವಾಸಿ ಅನೀಶ್ ಎಂದು ಗುರುತಿಸಲಾಗಿದೆ. ಆರೋಪಿಗಳು ಯಾವ ಉದ್ದೇಶಕ್ಕಾಗಿ ಶಾಸಕರನ್ನು ಹಿಂಬಾಲಿಸಿದ್ದಾರೆ ಎನ್ನುವುದು ಪೊಲೀಸ್ ತನಿಖೆಯ ನಂತರವಷ್ಟೇ ತಿಳಿದು ಬರಬೇಕಿದೆ.

Also Read  ಅಮಾಯಕರಿಗೆ ಭಯೋತ್ಪಾದಕ ಪಟ್ಟ ಕಟ್ಟಿದ ಕೆಲವು ಮಾಧ್ಯಮಗಳು ➤ ಕಡಬದಲ್ಲಿ ಪ್ರತಿಭಟನೆ ನಡೆಸಿದ ಎಸ್ಕೆಎಸ್ಸೆಸ್ಸೆಫ್

error: Content is protected !!
Scroll to Top