ಮೂಡಬಿದಿರೆ: ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ ಯುವಕ ಮೃತ್ಯು; ಇಬ್ಬರ ಸೆರೆ

ಮೂಡುಬಿದಿರೆ, ಫೆ.27: ಕ್ಷುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿ ಹಲ್ಲೆಗೊಳಗಾದ ಕೆಲ್ಲಪುತ್ತಿಗೆಯ ದಲಿತ ಯುವಕ ಸಿದ್ದು ಎಂಬವರ ಪುತ್ರ ರವೀಂದ್ರ (38) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಬಂಧಿತರನ್ನು ಆರೋಪಿಗಳಾದ ಶ್ರೀನಿವಾಸ (42) ಹಾಗೂ ಆನಂದ (40) ಎಂದು ಗುರುತಿಸಲಾಗಿದೆ.

ರವಿವಾರ ರಾತ್ರಿ ರವೀಂದ್ರ ಕೆಲಸ ಮುಗಿಸಿ ಮನೆಗೆ ಬಂದಾಗ ಕ್ಷುಲ್ಲಕ ವಿಚಾರಕ್ಕಾಗಿ ಸಹೋದರ ಶ್ರೀನಿವಾಸ ಹಾಗೂ ಭಾವ ಆನಂದ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಆರೋಪಿಗಳು ರವೀಂದ್ರರ ಹೊಟ್ಟೆಗೆ ತುಳಿದಿದ್ದು, ಪರಿಣಾಮ ರಕ್ತ ವಾಂತಿ ಮಾಡಿದ್ದರು. ಬೊಬ್ಬೆ ಕೇಳಿ ನೆರೆಮನೆಯವರು ಧಾವಿಸಿ ರವೀಂದ್ರರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಅಲ್ಲಿಂದ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಅಲ್ಲಿ ಸೋಮವಾರ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Also Read  ಕಡಬ: ಎರಡು ಕಡೆಗಳಲ್ಲಿ ಅಕ್ರಮ ಮರಳುಗಾರಿಕೆ ► ಒಂದು ಟಿಪ್ಪರ್, ಮರಳುಗಾರಿಕಾ ದೋಣಿ ವಶಕ್ಕೆ

ರವೀಂದ್ರ ಕರಿಮೆಣಸು ಕೊಯ್ಯಲು ಹೋಗಿ ಮರದಿಂದ ಬಿದ್ದಿದ್ದರೆಂದು ಆರೋಪಿಗಳು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಆದರೆ, ವಿಚಾರಣೆ ಸಂದರ್ಭ ಆರೋಪಿಗಳ ಹಲ್ಲೆಯಿಂದ ರವೀಂದ್ರ ಮೃತಪಟ್ಟಿದ್ದು ಎಂದು ತಿಳಿದುಬಂದಿದೆ. ರವೀಂದ್ರ ಅವರು ಅವಿವಾಹಿತರಾಗಿದ್ದು, ಮನೆಯ ಆಧಾರಸ್ತಂಭವಾಗಿದ್ದರು.

error: Content is protected !!
Scroll to Top