ಕುಂದಾಪುರ: ಸರಣಿ ಅಪಘಾತ; ಬೈಕ್ ಸವಾರ ಮೃತ್ಯು



ಕುಂದಾಪುರ, ಫೆ.14: ನಾಲ್ಕು ವಾಹನಗಳು ಏಕಮುಖ ಸಂಚಾರದಲ್ಲಿದ್ದಾಗ ಅಪಘಾತಕ್ಕೀಡಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮೊವಾಡಿ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ.





 

 

 

 

 

ಮೃತಪಟ್ಟ ಬೈಕ್ ಸವಾರನನ್ನು ಸಮೀಪದ ಹೊಸಾಡು ಗ್ರಾಮದ ಮುಲ್ಲಿಮನೆ ನಿವಾಸಿ ನಾರಾಯಣ ದೇವಾಡಿಗ ಎಂಬುವರ ಪುತ್ರ ಸುಕುಮಾರ ದೇವಾಡಿಗ(55) ಎಂದು ಗುರುತಿಸಲಾಗಿದೆ.






ಶುಕ್ರವಾರ ಸಂಜೆ ಸುಮಾರು 7 ಗಂಟೆಗೆ ಅಪಘಾತ ಸಂಭವಿಸಿದ್ದು, ಲಾರಿಯೊಂದು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಪ್ರಯಾಣಿಸುತ್ತಿತ್ತು. ಲಾರಿಯ ಹಿಂದೆ ಬೈಕ್ ಚಲಿಸುತ್ತಿತ್ತು. ಬೈಕ್ ನ ಹಿಂಬದಿಯಲ್ಲಿ ಇನ್ನೋವಾ ಕಾರು ಹಾಗೂ ಅದರ ಹಿಂದೆ ಸ್ಕಾರ್ಪಿಯೋ ಚಲಿಸುತ್ತಿತ್ತು. ಎದುರುಗಡೆಯಿಂದ ಹೋಗುತ್ತಿದ್ದ ಲಾರಿ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿ ನಿಂತ ಪರಿಣಾಮ ಹಿಂದುಗಡೆಯ ವಾಹನಗಳು ಡಿಕ್ಕಿ ಹೊಡೆದುಕೊಂಡಿವೆ. ಈ ಸಂದರ್ಭ ಲಾರಿ ಹಾಗೂ ಇನ್ನೋವಾ ನಡುವೆ ಸಿಕ್ಕಿ ಹಾಕಿಕೊಂಡ ಬೈಕ್ ಅಪ್ಪಚ್ಚಿಯಾಗಿದ್ದು, ಸವಾರ ಸುಕುಮಾರ ದೇವಾಡಿಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಸಾವನ್ನಪ್ಪಿದ ಸುಕುಮಾರ ದೇವಾಡಿಗ ಇಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದರು. ಶುಕ್ರವಾರ ಸಂಜೆ ಕೆಲಸ ಮುಗಿಸಿ ತನ್ನ ಬೈಕಿನಲ್ಲಿ ಮನೆ ಕಡೆಗೆ ಪ್ರಯಾಣಿಸುತ್ತಿದ್ದಾಗ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ. ವಿವಾಹಿತರಾಗಿರುವ ಸುಕುಮಾರ್ ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top