ಉಪ್ಪಿನಂಗಡಿ: ಪ್ರೀತಿಸಿದರೂ ಮದುವೆಯಾಗಲು ಅಡ್ಡಿಯಾದ ತೀರಾ ಬಡತನ ➤ ಹಿಂದೂ ಯುವತಿಯ ಮದುವೆಗೆ ನೇತೃತ್ವ ನೀಡಿದ ಮುಸ್ಲಿಮರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಮಾ.20. ಪರಸ್ಪರ ಪ್ರೀತಿಸಿ ಮದುವೆಯ ಹಂತಕ್ಕೆ ಬಂದರೂ ತೀರಾ ಬಡತನದಿಂದಾಗಿ ಅಸಹಾಯಕ ಪರಿಸ್ಥಿತಿಯಲ್ಲಿದ್ದ ಯುವತಿಯೋರ್ವಳ ವಿವಾಹವನ್ನು ಮುಸ್ಲಿಂ ಬಾಂಧವರೇ ಮುಂದೆ ನಿಂತು ನೆರವೇರಿಸಿಕೊಡುವ ಮೂಲಕ ಸೌಹಾರ್ದತೆ ಮೆರೆದ ಘಟನೆ ಉಪ್ಪಿನಂಗಡಿ ಸಮೀಪದ ಕರುವೇಲು ಎಂಬಲ್ಲಿ ಸೋಮವಾರದಂದು ನಡೆದಿದೆ.

ಫ್ಯಾಕ್ಟರಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಉಪ್ಪಿನಂಗಡಿಯ ಕರುವೇಲಿನ ಯುವತಿ ರೇವತಿ ಶರತ್ ಎಂಬಾತನನ್ನು ಪ್ರೀತಿಸಿ ಮದುವೆಯಾಗುವುದಾಗಿ ನಿಶ್ಚಯಿಸಿದ್ದು, ಮದುವೆ ಸರಾಗವಾಗಿ ನಡೆಯಲು ಮನೆಯಲ್ಲಿನ ತೀರಾ ಬಡತನ ಅಡ್ಡಿಯಾಗಿತ್ತು. ಈ ವಿಚಾರ ತಿಳಿದ ನೆರೆಯ ಮುಸ್ಲಿಂ ಬಂಧುಗಳು ನೆರವಿಗೆ ಬಂದಿದ್ದು, ಹುಡುಗಿಯ ಮನೆಯವರ ಪರವಾಗಿ ಹುಡುಗನ ಮನೆಯವರೊಂದಿಗೆ ಮಾತುಕತೆ ನಡೆಸಿ ಮದುವೆಗೆ ದಿನ ನಿಗದಿಪಡಿಸಿದ್ದಾರೆ. ಸೋಮವಾರದಂದು ನೆರೆಮನೆಯ ಲತೀಫ್ ಎಂಬವರ ಮನೆಯಿಂದ ಮದುಮಗಳನ್ನು ಸಿಂಗರಿಸಿ ಕರೆತಂದು ಹಿಂದೂ ಸಂಪ್ರದಾಯದಂತೆ ವಿವಾಹ ಶಾಸ್ತ್ರವನ್ನು ನೆರವೇರಿಸಿದರು. ಮದುವೆಯ ಅಂಗವಾಗಿ ಸೇರಿದ್ದ ಅತಿಥಿಗಳಿಗೆ ಭರ್ಜರಿ ಊಟವನ್ನು ಸಿದ್ಧಪಡಿಸಿ ಉಣ ಬಡಿಸಿದರು.

ಮಾಂಗಲ್ಯ ಸೂತ್ರ, ಮದುಮಗಳ 2 ಜತೆ ವಸ್ತ್ರವನ್ನು ಒಳಗೊಂಡಂತೆ ಎಲ್ಲಾ ಕಾರ್ಯಕ್ಕೆ ತಗುಲಿದ ವೆಚ್ಚವನ್ನು ಲತೀಫ್, ಕೆ.ಅಬೂಬಕ್ಕರ್, ಶಮೀರ್, ಪುತ್ತುಮೋನು ಮತ್ತಿತರರು ಭರಿಸಿ ಮಾನವೀಯತೆ ಮೆರೆದಿದ್ದು, ಜಾತಿ – ಧರ್ಮವನ್ನು ಮರೆತು ಮಾನವೀಯತೆಗೆ ಬೆಲೆ ಕಲ್ಪಿಸಿದ ಮುಸ್ಲಿಂ ಬಾಂಧವರ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.

error: Content is protected !!

Join the Group

Join WhatsApp Group