(ನ್ಯೂಸ್ ಕಡಬ) newskadaba.com ಕಡಬ, ಫೆ.04. ಶಿಕ್ಷಣ ಎನ್ನುವುದು ಕೇವಲ ಜ್ಞಾನ ಸಂಪಾದನೆ ಮಾಡಿ ಸ್ಥಾನಮಾನಗಳಿಸುದೇ ಧ್ಯೇಯವಾಗದೆ, ಅದು ಹೃದಯ ವೈಶಾಲ್ಯತೆಯನ್ನು ಪ್ರೇರೇಪಿಸಿ ಸಮಾಜದಲ್ಲಿ ಸೌಹಾರ್ದ ವಾತಾವರಣ ನಿರ್ಮಾಣಕ್ಕೆ ಕಾರಣವಾಗಬೇಕು, ಆ ಮೂಲಕ ದೇಶದ ಉತ್ತಮ ಪ್ರಜೆಗಳಾಗಬೇಕು ಎಂದು ಕ್ಯಾಥೋಲಿಕ್ ಧರ್ಮ ಸಭೆಯ ಮಂಗಳೂರು ಧರ್ಮ ಪ್ರಾಂತ್ಯದ ನೂತನ ಧರ್ಮಾಧ್ಯಕ್ಷ ಶ್ರೀ ಪೀಟರ್ ಪಾವ್ಲ್ ಸಲ್ದಾನ ಹೇಳಿದರು.
ಅವರು ಶನಿವಾರ ಕಡಬ ಸೈಂಟ್ ಜೋಕಿಮ್ಸ್ ಸಮೂಹ ಸಂಸ್ಥೆಗಳಿಗೆ ಭೇಟಿ ಸಂಸ್ಥೆಯ ವತಿಯಿಂದ ಸನ್ಮಾನ ಸ್ವೀಕರಿಸಿ ಆಶೀರ್ವಚನ ನೀಡುತ್ತಿದ್ದರು. ನಮ್ಮಲ್ಲಿ ಇಂದು ಅನುಮಾನದ ಗೋಡೆ ನಿರ್ಮಾಣವಾಗಿದೆ, ಅದು ತಗ್ಗಬೇಕಾದರೆ ಇನ್ನೊಬ್ಬ ಸಮುದಾಯಕ್ಕೆ ಗೌರವ ನೀಡುವ , ಪ್ರೀತಿ ವಿಶ್ವಾಸದಿಂದ ಕಾಣುವ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು, ಇನ್ನೊಂದು ಸಮುದಾಯದ ಭಾಷೆ, ಜೀವನ ಕ್ರಮ, ಆಚಾರ ವಿಚಾರಗಳನ್ನು ಅರಿತು ಬಾಳುವ ಸತ್ಸಂಪ್ರದಾಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದ ಸಲ್ದಾನ ಅವರು ದ.ಕ ಜಿಲ್ಲೆಯಲ್ಲಿ ಹಲವು ಭಾಷೆಯ ಜನ ಇದ್ದಾರೆ, ಅವರ ಸಂಸ್ಕಾರ ಸಂಸ್ಕøತಿ ಭಿನ್ನವಾಗಿದೆ, ಅದನ್ನೆಲ್ಲಾ ಅರಿತು ಬೇರೆ ಬೇರೆ ಭಾಷೆಗಳನ್ನು ಕಲಿತರೆ ಸಮಾಜದಲ್ಲಿ ದ್ವೇಷ ದೂರವಾಗುತ್ತದೆ, ನಮ್ಮಲ್ಲಿ ಸಾಮರಸ್ಯ ಮೂಡಿ ಉತ್ತಮ ಸಮಾಜ ನಿರ್ಮಾಣವಾಗಲು ನಾವೆಲ್ಲಾ ಸಹೋದರತೆಯಿಂದ ಬಾಳಬೇಕು ಎಂದು ಹೇಳಿ ಕಡಬ ಸೈಂಟ್ ಜೋಕಿಮ್ಸ್ ವಿದ್ಯಾ ಸಂಸ್ಥೆ ಅತ್ಯತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.