ಸುಬ್ರಹ್ಮಣ್ಯ: ಸಂಪೂರ್ಣ ಪರಿಸರ ಸ್ನೇಹಿ ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್‌ ನಿರ್ಮಾಣ

(ನ್ಯೂಸ್ ಕಡಬ) newskadaba.com.ಸುಬ್ರಹ್ಮಣ್ಯ,ಜ.12. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಿಂದ 2 ಕಿ.ಮೀ. ದೂರದ ಕ್ಷೇತ್ರದ ಪ್ರವೇಶ ಹಂತದಲ್ಲಿ ರಾ.ಹೆದ್ದಾರಿಗೆ ತಾಗಿಕೊಂಡೇ ಇರುವ ಮೀಸಲು ಅರಣ್ಯ ಪ್ರದೇಶದ 40 ಎಕ್ರೆಯ ಪೈಕಿ 25 ಎಕ್ರೆ ಜಾಗದಲ್ಲಿ ಸುಸಜ್ಜಿತ ವೃಕ್ಷೋದ್ಯಾನವನ ನಿರ್ಮಾಣವಾಗಲಿದೆ. ನದಿ ತಟದಲ್ಲಿ ನಿಸರ್ಗ ರಮಣೀಯ ತಾಣದಲ್ಲಿ ಉದ್ಯಾವನಕ್ಕೆ ಪ್ರವೇಶಿಸಲು ಆಕರ್ಷಕ ಮಹಾದ್ವಾರ ತೆರೆದುಕೊಳ್ಳಲಿದೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಕುಮಾರಧಾರೆ ನದಿ ದಂಡೆ ಮೇಲಿನ ಮೀಸಲು ಅರಣ್ಯ ಪ್ರದೇಶದಲ್ಲಿ ಉದ್ದೇಶಿತ ವೃಕ್ಷೋದ್ಯಾನವನ ನಿರ್ಮಾಣ ಗೊಳ್ಳಲಿದೆ. ಈ ಮೂಲಕ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ಕೊಡುವವರಿಗೆ ಪ್ರಾಕೃತಿ ಸೊಬಗು ಸವಿಯುವ ಅವಕಾಶ ಲಭಿಸಲಿದೆ.

ಆರಂಭಿಕ ಹಂತದ ಕೆಲಸಗಳಿಗೆ ಗುರುವಾರ ಚಾಲನೆ ದೊರಕಿದೆ. ಮುಂದಿನ ಐದು ವರ್ಷದಲ್ಲಿ ಹಂತ-ಹಂತವಾಗಿ ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್‌ ಸಿದ್ಧವಾಗಲಿದೆ. 5 ಕೋಟಿ ರೂ. ವೆಚ್ಚದಲ್ಲಿ ವೃಕ್ಷೋದ್ಯಾನವನ ನಿರ್ಮಾಣವಾಗಲಿದೆ. ಅರಣ್ಯ ಇಲಾಖೆ ಮೀಸಲು ಅರಣ್ಯದಲ್ಲಿ ಸ್ಥಳದ ಗಡಿ ಗುರುತು ಮಾಡಿದೆ. ಗಡಿ ಗುರುತು ಬಳಿಕ 17 ಲಕ್ಷ ರೂ. ವೆಚ್ಚದಲ್ಲಿ ಬೇಲಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದೆ. ಹಂತಹಂತವಾಗಿ ಅನುದಾನ ಬಳಸಿಕೊಂಡು ಉದ್ಯಾನವನ ನಿರ್ಮಿಸಲಾಗುತ್ತದೆ. ಕುಮಾರಧಾರೆ ಸ್ನಾನ ಘಟ್ಟದ ಮೂರು ಪಾರ್ಶ್ವಕ್ಕೆ ಹೊಂದಿಕೊಂಡು ಈ ಉದ್ಯಾನವನ ತಲೆಎತ್ತಲಿದೆ.

ಮಲೆನಾಡಿನಲ್ಲಿ ಬೆಳೆಯುವ ಅಪೂರ್ವ ಸಸ್ಯರಾಶಿಗಳನ್ನು ಇಲ್ಲಿ ಬೆಳೆಸಲಾಗುತ್ತಿದೆ. ಜತೆಗೆ 17 ಬಗೆ ಜಾತಿಯ ಬಿದಿರು ಬೆಳೆಯಲಾಗುತ್ತದೆ. ವಿವಿಧ ಜಾತಿಗಳ ಬಣ್ಣಬಣ್ಣದ ಹೂವು ಹಾಗೂ ಪಶ್ಚಿಮ ಘಟ್ಟದ ಅಮೂಲ್ಯ ಮರಗಳನ್ನು ಬೆಳೆದು ಸುಂದರ ಉದ್ಯಾನವನ ಸ್ಥಾಪಿಸಲಾಗುತ್ತಿದೆ. ಸರಕಾರವು ಅರಣ್ಯ ಇಲಾಖೆ ಮೂಲಕ ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಸಸ್ಯಗಳ ಉದ್ಯಾನವನವನ್ನು ತಾಲೂಕುವಾರು ನಿರ್ಮಿಸಲು ಯೋಜನೆ ರೂಪಿಸಿತ್ತು. ಸುಳ್ಯ ತಾಲೂಕಿನ ಯಾವುದಾದರೊಂದು ಸ್ಥಳದಲ್ಲಿ ಉದ್ಯಾನವನ ನಿರ್ಮಿಸಲು ಅರಣ್ಯ ಇಲಾಖೆ ಎರಡು ವರ್ಷದ ಹಿಂದೆ ಮಂಜೂರಾತಿ ನೀಡಿತ್ತು. ಈಗ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಆಸಕ್ತಿ ವಹಿಸಿದೆ.

error: Content is protected !!

Join the Group

Join WhatsApp Group