ಆಲಂಕಾರು: ಕುಡಿಯುವ ನೀರಿನ ವ್ಯವಸ್ಥೆ ಹಳ್ಳ ಹಿಡಿಯುತ್ತಿದೆ

(ನ್ಯೂಸ್ ಕಡಬ) newskadaba.com ಆಲಂಕಾರು,ಜು.06. ಜನತೆಗೆ ಶುದ್ದ ಗಾಳಿ, ಶುದ್ದ ಪರಿಸರದ ಜೊತೆಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರಬೇಕೆಂಬ ಸರಕಾರದ ಮಹತ್ತರ ಯೋಜನೆಗಳು ಟೆಂಡರುದಾರರ ಸೋಮಾರಿತನದಿಂದ ಜನತೆಗೆ ಸಮರ್ಪಕವಾಗಿರದೆ ಹಳ್ಳ ಹಿಡಿಯುತ್ತಿದೆ ಮತ್ತು ಪುತ್ತೂರು ತಾಲೂಕಿನ 13 ಗ್ರಾಮಗಳಲ್ಲಿ ನಿರ್ಮಾಣವಾದ ಘಟಕಗಳು ತುಕ್ಕುಹಿಡಿಯುತ್ತಿದೆ.
ಇಂತಹ ಘಟಕಗಳಲ್ಲಿ ಆಲಂಕಾರು ಗ್ರಾಮ ಪಂಚಾಯತ್ ಅಧೀನದ ಜಾಗದಲ್ಲಿ 2016ರಲ್ಲಿ ಗಟಕ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಸ್ಥಳೀಯರ ಭಾರಿ ವಿರೋಧದ ನಡುವೆಯು ಆಮೆಗತಿಯಲ್ಲಿ ಸಾಗಿದ ಕಾಮಗಾರಿಯು ಒಂದು ವರ್ಷದ ಬಳಿಕ ಪೂರ್ಣಗೊಂಡಿತು. ಇದೀಗ ಕಾಮಗಾರಿ ಪೂರ್ಣಗೊಂಡು ವರ್ಷ ಒಂದು ಸಂದರೂ ಗ್ರಾಮದ ಜನತೆಗೆ ಶುದ್ದ ನೀರಿನ ಘಟಕ ಒಂದು ಮರೀಚಿಕೆಯಾಗಿದೆ. ರಾಜ್ಯದಲ್ಲಿ ಕುಡಿಯುವ ನೀರಿನ ಕೊರೆತ ಇದೆಯೆಂದು ರಾಜ್ಯಾದ್ಯಾಂತ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಸರಕಾರ ನಿರ್ಧರಿಸಿತು. ಸ್ಥಳೀಯಾಡಳಿತದಲ್ಲಿಯು ಚರ್ಚಿಸದೆ ನೇರ ಟೆಂಡರ್ ಪ್ರಕ್ರಿಯೆ ಮುಗಿಸಿ ಟೆಂಡರ್ದಾರರ ಆಯ್ಕೆ ಮಾಡಿ ಸುಮ್ಮನಾಯಿತು. ಅರ್ಥಾತ್ ಸರಕಾರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಈ ವಿಚಾರವನ್ನೇ ಮರೆತು ಬಿಟ್ಟಿತು.

ಇಂತಹ ಘಟಕಗಳ ನಿರ್ಮಾಣ ಕಾಮಗಾರಿಯು ತಾಲೂಕಿನಲ್ಲಿ 2016ರಿಂದ ಆರಂಭವಾಗಿದೆ. ಬಳಿಕದ ದಿನಗಳಲ್ಲಿ ಗುತ್ತಿಗೆದಾರರು ಅಲ್ಲಲ್ಲಿ ಒಂದಷ್ಟು ಶೆಡ್ಗಳನ್ನು ಹಾಕಿ ಕೆಲವು ಕಡೆ ಯಂತ್ರಗಳನ್ನು ಜೋಡಿಸಿ ತೆರಳಿದ್ದಾರೆ. ಪುತ್ತೂರು ತಾಲೂಕಿನ13 ಕಡೆಗಳಲ್ಲಿ ಇಂತಹ ಘಟಕಗಳಿವೆ. ಕೆಲವು ಶೆಡ್ಗಳ ಸ್ಥಿತಿಯಲ್ಲಿ, ಇನ್ನು ಕೆಲವು ಯಂತ್ರಗಳ ಜೊಡಣೆ ಹೀಗೆ ಎಲ್ಲಾ ಅರ್ಧಂಬರ್ಧ ಕೆಲಸ ಆಗಿದೆ. ಪುತ್ತೂರು ತಾಲೂಕಿನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದ ಈ ಯೋಜನೆಗಳು ಕಳೆದ 2 ವರ್ಷದಿಂದ ಬಿಸಿಲು, ಮಳೆ, ಗಾಳಿಗೆ ಮೈಯೊಡ್ಡಿ ನಿಂತಿದ್ದು, ಇದುವರೆಗೆ ಒಂದೇ ಒಂದು ಹನಿ ಶುದ್ದ ನೀರು ಹೊರಗೆ ಬಂದಿಲ್ಲವಾಗಿದೆ. ನೋಡೋಕೆ ಇದು ಒಂದು ಚಂದದ ಸ್ಮಾರಕದಂತಿದ್ದು ಒಂದು ಘಟಕವನ್ನು 15ಲಕ್ಷ ಅನುದಾನದಲ್ಲಿ ನಿರ್ಮಿಸಲಾಗಿದೆ. ಗ್ರಾಮ ಪಂಚಾಯತ್ಗಳಲ್ಲಿ ಇದರ ಬಗ್ಗೆ ಸ್ಪಷ್ಟ ಮಾಹಿತಿಗಳು ಇಲ್ಲವಾದರೂ 1ರೂಪಾಯಿಯ ನಾಣ್ಯ ಹಾಕಿದರೆ ಒಂದು ಲೀಟರ್ ನೀರು ಬರುತ್ತದೆ ಎಂಬ ಪಂಚತಂತ್ರ ಕಥೆ ಹೇಳುತ್ತಾರೆ.
ಸರಕಾರಿ ಹಣವೆಂದರೆ ಯಾಕಿಷ್ಟು ತಾತ್ಸಾರ ಒಂದು ಯೋಜನೆಯನ್ನು ಪೂರ್ಣಗೊಳಿಸುವ ಜವಾಬ್ದಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಇಲ್ಲವೇ? ಇಂತಹವರನ್ನು ನಂಬಿ ಕುಳಿತರೆ ಜನರ ಬಾಯಾರಿಕೆಯಾದರೂ ಯಾವಾಗ ನೀಗಬಹುದು? ಶುದ್ದನೀರಿನ ಘಟಕ ನಿರ್ಮಾಣ ಎಂಬುವುದು ಒಂದು ಹಣ ಮಾಡುವ ದಂಧೆಯೇ ಎಂದು ಜನತೆಯೆ ಪ್ರಶ್ನೆಯಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ.
ಉಸ್ತುವಾರಿಗೆ ಟೆಂಡರ್ ಕರೆದು ಹಸ್ತಾಂತರಿಸಲಾಗುವುದು_ ಮಹದೇವ ಪ್ರಸಾದ್
ಪುತ್ತೂರು ತಾಲಳೂಕಿನ 13 ಕಡೆಗಳಲ್ಲಿ ಶುದ್ದ ನೀರಿನ ಘಟಕ ನಿರ್ಮಿಸಲಾಗುವುದು. ಕೆಲವೊಂದು ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು ಮತ್ತೆ ಕಲವು ಕಡೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ಕಾಮಗಾರಿ ಪೂರ್ಣಗೊಂಡಿರುವ ಘಟಕಗಳ ಸ್ಥಿಗತಿಗಳನ್ನು ಪರಿಶೀಲಿಸಲು ತಜ್ಞರ ತಂಡವನ್ನು ಕಳುಹಿಸಲಾಗಿದೆ. ಕೆಲವೊಂದು ಘಟಕಗಳ ಕಾಮಗಾರಿ ಪೂರ್ಣಗೊಂಡಿದ್ದರೂ ಇದೀಗ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಅಂತಹ ಘಟಕಗಳ ದುರಸ್ತಿಗಾಗಿ ಜುಲೈ2ರಿಂದ ತಜ್ಞರ ತಂಡಗಳು ಕಾರ್ಯನಿರತವಾಗಿದೆ. ಎಲ್ಲಾ ಘಟಕಗಳ ಮಾಹಿತಿ ಬಂದ ತಕ್ಷಣ ಸ್ಥಳಿಯಾಡಳಿತದ ಅಧೀನಕ್ಕೊಳಪಡಿಸಿ 5ವರ್ಷದ ಅವಧಿಯ ನಿರ್ವಹಣೆಗಾಗಿ ಟೆಂಡರ್ ಕರೆಯಲಾಗುವುದು ಎಂದು ಎಕ್ಸಿಕ್ಯೂಟಿವ್ ಇಂಜಿನಿಯರ್ ಮಹದೇವಪ್ರಸಾದ್ ಪತ್ರಿಕೆಗೆ ಪ್ರತಿಕ್ರಿಯಿಸಿದರು.

error: Content is protected !!

Join the Group

Join WhatsApp Group